
ಮಹದೇವ ಪ್ರಸನ್ನ
ಧಾರವಾಡ: ‘ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಐಟಿ) `ಕ್ವಾಂಟಮ್ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಮತ್ತು ಕಂಪ್ಯೂಟಿಂಗ್' ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲು ರಾಜ್ಯ ಸರ್ಕಾರವು ಲೋಕಲ್ ಎಕನಾಮಿಕಲ್ ಆಕ್ಸಲರೇಟರ್ ಪ್ರೋಗ್ರಾಂ (ಲೀಪ್) ಯೋಜನೆಯಡಿ ₹18 ಕೋಟಿ ಮಂಜೂರು ಮಾಡಿದೆ’ ಎಂದು ಐಐಐಟಿ ನಿರ್ದೇಶಕ ಮಹದೇವ ಪ್ರಸನ್ನ ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನ ಕೇವಲ ಭವಿಷ್ಯದ ತಂತ್ರಜ್ಞಾನವಲ್ಲ, ಇದು ವೈಜ್ಞಾನಿಕ ಸಂಶೋಧನೆ, ಔಷಧ ವಿಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ಹಣಕಾಸು, ಸೈಬರ್ ಸುರಕ್ಷತೆ, ಕೈಗಾರಿಕೆ ಕ್ಷೇತ್ರಗಳಲ್ಲಿ ಬದಲಾವಣೆ ತರಲು ಮುಖ್ಯ ಪಾತ್ರವಹಿಸುತ್ತದೆ’ ಎಂದರು.
‘ವಿದ್ಯಾರ್ಥಿಗಳಿಗೆ ಮತ್ತು ಸಂಶೋಧಕರಿಗೆ ಕ್ವಾಂಟಮ್ ತಂತ್ರಜ್ಞಾನದ ತರಬೇತಿ ನೀಡುವ ಜತೆ ಉದ್ಯಮ (ಸ್ಟಾರ್ಟ್ಅಪ್) ಮತ್ತು ಶೈಕ್ಷಣಿಕ ವಲಯದಲ್ಲೂ ಮಾನವ ಸಂಪನ್ಮೂಲ ಸೃಷ್ಟಿಸುವುದು ಈ ಕೇಂದ್ರದ ಪ್ರಮುಖ ಉದ್ದೇಶವಾಗಿದೆ’ ಎಂದು ತಿಳಿಸಿದರು.
‘ಸಾಂಪ್ರದಾಯಿಕ ಕಂಪ್ಯೂಟರ್ಗಿಂತ ಕ್ವಾಂಟಮ್ ಕಂಪ್ಯೂಟರ್ ವೇಗವಾಗಿ ಕಾರ್ಯ ನಿರ್ವಹಿಸುತ್ತದೆ. ಆರೋಗ್ಯ ರಕ್ಷಣೆಯಿಂದ ಹಿಡಿದು ವೇಗವರ್ಧಿತ ಔಷಧ ಅನ್ವೇಷಣೆಯ ಮೂಲಕ ಇಂಧನ ಉತ್ಪಾದನೆವರೆಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿಗೆ ಕಾರಣವಾಗಲಿದೆ’ ಎಂದರು.
‘ಭಾರತವು ವಿಶ್ವಮಟ್ಟದಲ್ಲಿ ಕ್ವಾಂಟಮ್ ಕಂಪ್ಯೂಟಿಂಗ್ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರಲು ಸನ್ನದ್ಧವಾಗಿದೆ. ಈ ನಿಟ್ಟಿನಲ್ಲಿ ಧಾರವಾಡ ಐಐಐಟಿ ಕೇಂದ್ರ ಅನೇಕ ಕೊಡುಗೆ ನೀಡುತ್ತಿದೆ. ಐಐಐಟಿಯ ಬಿ.ಟೆಕ್ ಕೋರ್ಸ್ನ ವಿದ್ಯಾರ್ಥಿಗಳಿಗೆ ಎರಡು ವರ್ಷದ ಕೋರ್ಸ್ ಉತ್ತರ ಕರ್ನಾಟಕದ ಎಂಜಿನಿಯರಿಂಗ್ ಮತ್ತು ಮೂಲ ವಿಜ್ಞಾನ ವಿದ್ಯಾರ್ಥಿಗಳಿಗೆ 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಆರಂಭಿಸಿದೆ’ ಎಂದರು.
ಕೇಂದ್ರ ಸರ್ಕಾರವು ರಾಷ್ಟ್ರೀಯ ಕ್ವಾಂಟಮ್ ಮಿಷನ್ ಮೂಲಕ ದೊಡ್ಡ ಮೊತ್ತದ ಬಂಡವಾಳ ಹೂಡಿಕೆ ಮಾಡುತ್ತಿದೆ. ಕೆಲ ವರ್ಷಗಳಲ್ಲಿ ಔಷಧ ಅಭಿವೃದ್ಧಿ ಹಣಕಾಸು ವಿಶ್ಲೇಷಣೆ ಕ್ರಿಪ್ಟೋಗ್ರಫಿ ಕೃತಕ ಬುದ್ಧಿಮತ್ತೆ ಅಂತಹ ಕ್ಷೇತ್ರಗಳಲ್ಲಿ ಕ್ವಾಂಟಮ್ ತಂತ್ರಜ್ಞಾನವು ಬದಲಾವಣೆಗಳನ್ನು ತರಲಿದೆ–ದೀಪಕ, ಪ್ರಾಧ್ಯಾಪಕ ಐಐಐಟಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.