
ಪ್ರಾತಿನಿಧಿಕ ಚಿತ್ರ
ಕಲಘಟಗಿ: ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಸೇರಿ 15ಕ್ಕೂ ಹೆಚ್ಚು ಜನರನ್ನು ಕಚ್ಚಿ ಗಾಯಗೊಳಿಸಿದ್ದ ಹುಚ್ಚು ನಾಯಿಯೊಂದನ್ನು ಸೋಮವಾರ ಸ್ಥಳೀಯರು ಹೊಡೆದು, ಕೊಂದುಹಾಕಿದ್ದಾರೆ.
ಭಾನುವಾರ ರಾತ್ರಿ ಕಾಣಿಸಿಕೊಂಡ ಹುಚ್ಚು ನಾಯಿಯು ಮನೆ ಅಂಗಳದಲ್ಲಿ ಆಡುತ್ತಿದ್ದ ಮಕ್ಕಳು, ಮಹಿಳೆಯರು, ವೃದ್ಧರು ಸೇರಿದಂತೆ ಸಿಕ್ಕ ಸಿಕ್ಕವರ ಮೇಲೆ ಮನಬಂದಂತೆ ಕಚ್ಚಿ ಗಾಯಗೊಳಿಸಿತ್ತು. ಈ ನಾಯಿಯನ್ನು ಜನರು ಹೆದರಿಸಿ ಓಡಿಸಿದ್ದರು. ಇದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೋಮವಾರ ಬೆಳಿಗ್ಗೆ ಮತ್ತೆ ಗ್ರಾಮದಲ್ಲಿ ಕಾಣಿಸಿಕೊಂಡ ಹುಚ್ಚುನಾಯಿಯು, ಮಹಿಳೆ ಸೇರಿದಂತೆ ಹಲವರ ಮೇಲೆ ದಾಳಿ ಮಾಡಿ ಗಾಯಗೊಳಿಸಿತ್ತು. ಕೈ, ಕಾಲು ಹಾಗೂ ಮುಖದ ಭಾಗಕ್ಕೆ ಗಾಯಗಳಾಗಿದ್ದವು. ಗಾಯಗೊಂಡವರಿಗೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದೆ. ಕೆಲವರನ್ನು ಹುಬ್ಬಳ್ಳಿ ಕೆಎಂಸಿಆರ್ಐಗೆ ದಾಖಲಿಸಲಾಗಿದೆ.
ಕಡಿವಾಣ ಹಾಕಿ: ಗ್ರಾಮದಲ್ಲಿ ಬೀದಿನಾಯಿಗಳು ವಿಪರೀತ ಹೆಚ್ಚಾಗಿವೆ. ಚಿಕನ್ ಸೆಂಟರ್ಗಳೇ ಇದಕ್ಕೆ ಕಾರಣವಾಗಿದ್ದು ಮಾಂಸದ ತ್ಯಾಜ್ಯ ಎಲ್ಲೆಂದರಲ್ಲಿ ಎಸೆಯುತ್ತಿದ್ದಾರೆ. ಅದನ್ನು ತಿನ್ನುವ ನಾಯಿಗಳು ಬಸ್ ನಿಲ್ದಾಣ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಭವನದ ಸುತ್ತ ಜನನಿಬಿಡ ಪ್ರದೇಶದಲ್ಲಿ ಬೀಡುಬಿಟ್ಟಿವೆ. ಇವು ಜನರ ಮೇಲೆ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥ ಅರುಣ ತಾಳಿಕೋಟಿ ತಿಳಿಸಿದರು.
‘ಚಿಕನ್ ಅಂಗಡಿ ಬೇರೆ ಕಡೆ ಸ್ಥಳಾಂತರಿಸಬೇಕು. ಅದರಂತೆ, ಬೀದಿನಾಯಿಗಳನ್ನು ಬೇರೆಡೆ ಸಾಗಿಸಬೇಕು’ ಎಂದು ಗ್ರಾಮಸ್ಥ ಅಶೋಕ ರಜಪೂತ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.