ADVERTISEMENT

ಕೇಂದ್ರ ಬಜೆಟ್‌; ರೈಲ್ವೆ ಮಾರ್ಗ ದ್ವಿಪಥಗಳಾಗಿ ಅಭಿವೃದ್ಧಿ: ಪಿ.ಅನಂತ್‌

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 5:57 IST
Last Updated 3 ಫೆಬ್ರುವರಿ 2026, 5:57 IST
   

ಹುಬ್ಬಳ್ಳಿ: ‘ಕೊಟ್ಟೂರು–ಹರಿಹರ, ಹಾಸನ– ಬೆಂಗಳೂರು, ಬೀದರ್‌–ಕಲಬುರಗಿ, ಹುಬ್ಬಳ್ಳಿ– ಚಿಕ್ಕಜಾಜೂರು ರೈಲ್ವೆ ಮಾರ್ಗಗಳನ್ನು ದ್ವಿಪಥಗಳಾಗಿ ಅಭಿವೃದ್ಧಿ ಮಾಡುವುದಕ್ಕೆ ಬಜೆಟ್‌ನಲ್ಲಿ ಅನುದಾನ ಒದಗಿಸಲಾಗಿದೆ’ ಎಂದು ನೈರುತ್ಯ ರೈಲ್ವೆ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ.ಅನಂತ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜನದಟ್ಟಣೆ ಕಾರಿಡಾರ್‌ ಎಂದು ಗುರುತಿಸಲಾದ ಯಶವಂತಪುರ–ಯಲಹಂಕ, ಯಲಹಂಕ–ಪೆನುಕೊಂಡ, ರಾಮನಗರ–ಮೈಸೂರು, ಅರಸೀಕೆರೆ– ಮೈಸೂರು ಹಾಗೂ ದೌಂಡ್‌–ಕಲಬುರಗಿ ಮಾರ್ಗಗಳನ್ನು ಇನ್ನಷ್ಟು ಉನ್ನತೀಕರಿಸಿ ಕಾರ್ಯದಕ್ಷತೆ ಹೆಚ್ಚಿಸಲಾಗುವುದು’ ಎಂದು ತಿಳಿಸಿದರು.

‘ಕರಾವಳಿ ಭಾಗ ಹಾಗೂ ಬಂದರುಗಳ ನಡುವಿನ ಸಂಪರ್ಕ ಬಲಪಡಿಸಲಾಗುತ್ತಿದೆ. ಮುಖ್ಯವಾಗಿ ನೇತ್ರಾವತಿ– ಮಂಗಳೂರು ಕೇಂದ್ರ, ಕಂಕನಾಡಿ–ಪಣಂಬೂರು ಮಾರ್ಗಗಳು ಅಭಿವೃದ್ಧಿಯಾಗಲಿವೆ. ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯಡಿ ₹1,981 ಕೋಟಿ ಅನುದಾನದಲ್ಲಿ 61 ರೈಲು ನಿಲ್ದಾಣಗಳನ್ನು ಮರುಅಭಿವೃದ್ಧಿ ಮಾಡಲಾಗುವುದು’ ಎಂದರು.

ADVERTISEMENT

‘ಯಶವಂತಪುರ, ಬೆಂಗಳೂರು ಕಂಟೊನ್ಮೆಂಟ್‌ ಹಾಗೂ ತುಮಕೂರು ರೈಲು ನಿಲ್ದಾಣಗಳ ಅಭಿವೃದ್ಧಿ ಕಾರ್ಯವು ನಡೆಯುತ್ತಿದೆ’ ಎಂದು ಹೇಳಿದರು.

‘ಕರ್ನಾಟಕದಲ್ಲಿ 12 ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತು ಮೂರು ಅಮೃತ್ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ಸಂಚಾರ ಸೇವೆ ಒದಗಿಸುತ್ತಿವೆ. ಇದರಿಂದಾಗಿ ಪ್ರಯಾಣದ ವೇಗ, ಆರಾಮದಾಯಕ ಮತ್ತು ಸಂಚಾರದ ದಕ್ಷತೆ ಹೆಚ್ಚಾಗಿದೆ. ಪ್ರೀಮಿಯಂ ರೈಲು ಸೇವೆಗಳ ವಿಸ್ತರಣೆಯಿಂದಾಗಿ ರಾಜ್ಯದ ಒಳಗೂ, ಹೊರಗೂ ಸಂಪರ್ಕ ಕ್ಷೇತ್ರದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿವೆ’ ಎಂದು ತಿಳಿಸಿದರು.

ವಿಡಿಯೊ  ಕಾನ್ಫರೆನ್ಸ್‌ನಲ್ಲಿ ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕಿ ಬೇಲಾ ಮೀನಾ, ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್, ವಿವಿಧ ವಿಭಾಗಗಳ ಪ್ರಧಾನ ಮುಖ್ಯಸ್ಥರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.