ಹುಬ್ಬಳ್ಳಿ: ‘ಪ್ರಯಾಣಿಕರ ದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿಯಾಗಿ ವಿಶೇಷ ರೈಲು ಸೇವೆ ಹಾಗೂ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗಿದೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಹೇಳಿದರು.
ನಗರದ ರೈಲು ಸೌಧದಲ್ಲಿ ಶುಕ್ರವಾರ ನಡೆದ ನೈರುತ್ಯ ರೈಲ್ವೆ 24ನೇ ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು.
‘ನೈರುತ್ಯ ರೈಲ್ವೆಯು 9 ಎಕ್ಸ್ಪ್ರೆಸ್ ರೈಲುಗಳ ಸೇವೆಯನ್ನು ವಿಸ್ತರಿಸಲಾಗಿದೆ. 404 ವಿಶೇಷ ರೈಲುಗಳನ್ನು ಹಬ್ಬ ಮತ್ತು ರಜಾದಿನಗಳಲ್ಲಿ ಓಡಿಸಲಾಗಿದೆ. ಪ್ರಯಾಣಿಕರ ಅಗತ್ಯಗಳನ್ನು ಪೂರೈಸಲು ಸಂಬಂಧಿಸಿದ ರೈಲುಗಳಲ್ಲಿ ಹೆಚ್ಚುವರಿಯಾಗಿ 1,429 ಬೋಗಿಗಳನ್ನು ಅಳವಡಿಸಲಾಗಿದೆ‘ ಎಂದರು.
‘ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ನಿಲ್ದಾಣಗಳಲ್ಲಿ ಸೌಲಭ್ಯ ಹೆಚ್ಚಿಸಲು ಯೋಜನೆಗಳನ್ನು ರೂಪಿಸಲಾಗಿದೆ. ಪ್ರಯಾಣಿಕರ ಸಂಚಾರದಿಂದ ಇಲಾಖೆಗೆ ಉತ್ತಮ ಆದಾಯವೂ ಬಂದಿದೆ‘ ಎಂದು ತಿಳಿಸಿದರು.
ರೈಲ್ವೆ ಬಳಕೆದಾರರ ಸಮಾಲೋಚನಾ ಸಮಿತಿಯ ಪ್ರಮುಖರಾದ ಜಿ.ಕೆ.ಆದಪ್ಪಗೌಡರ್, ಸಿದ್ದರಾಮಯ್ಯ ಪಿ.ಸುಣಶಿಮಠ್, ಕೆ.ಬಿ.ಲಿಂಗರಾಜು, ಪಿ.ಶ್ರೀನಿವಾಸ್, ದೇವಾನಂದ್ ಎಸ್.ನಾಯಕ್ ಭಂಡಾರಿ, ಸುಶೀಲ್ ನೋವಲ್, ಮಹೇಂದ್ರ ಎಚ್.ಸಿಂಘಿ, ಬಾಬುಲಾಲ್ ಜಿ. ಜೈನ್, ಲಕ್ಷ್ಮಣ್ ಎಚ್, ಹಿಮಾಂಶು ಶೇಖರ್ ಹಾಗೂ ಇಲಾಖೆಯ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಕೆ.ಎಸ್.ಜೈನ್, ಇಲಾಖೆಗಳ ಪ್ರಧಾನ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.