ADVERTISEMENT

ಧಾರವಾಡ: ಅಕಾಲಿಕ ಮಳೆಗೆ ನೆಲ ಕಚ್ಚಿದ ಮಾವು

ರಾಯಸಾಬ ಅನಸರಿ
Published 16 ಏಪ್ರಿಲ್ 2023, 4:51 IST
Last Updated 16 ಏಪ್ರಿಲ್ 2023, 4:51 IST
ಧಾರವಾಡ ತಾಲ್ಲೂಕಿನ ತೇಗೂರ ಗ್ರಾಮದ ಹೊಲವೊಂದರಲ್ಲಿ ಅಕಾಲಿಕ ಮಳೆಗೆ ನೆಲಕ್ಕುರುಳಿದ ಮಾವು
ಧಾರವಾಡ ತಾಲ್ಲೂಕಿನ ತೇಗೂರ ಗ್ರಾಮದ ಹೊಲವೊಂದರಲ್ಲಿ ಅಕಾಲಿಕ ಮಳೆಗೆ ನೆಲಕ್ಕುರುಳಿದ ಮಾವು   

ಧಾರವಾಡ: ಕಳೆದು ಎರಡು ದಿನಗಳಿಂದ ಬಿರುಗಾಳಿ ಸಹಿತ ಸುರಿದ ಅಕಾಲಿಕ ಆಲಿಕಲ್ಲು ಮಳೆಗೆ ಫಸಲಿಗೆ ಬಂದಿದ್ದ ಮಾವಿನ ಕಾಯಿಗಳು ಸಂಪೂರ್ಣವಾಗಿ ನೆಲಕ್ಕುರುಳಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಇದರಿಂದಾಗಿ ಈ ಬಾರಿ ಮಾವಿನ ಹಣ್ಣಿನ ಬೆಲೆಯೂ ಹೆಚ್ಚಾಗುವ ಸಾಧ್ಯತೆ ಇದೆ.

ಜಿಲ್ಲೆಯ 8 ಸಾವಿರ ಹೆಕ್ಟೆರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ಅದರಲ್ಲಿ ಅಂದಾಜು ಶೇ 50ರಷ್ಟು ಮಾವು ಹಾಗೂ ವಿವಿಧ ತೋಟಗಾರಿಕಾ, ತರಕಾರಿ ಬೆಳೆಗಳು ಹಾಳಾಗಿವೆ ಎಂದು ಅಂದಾಜಿಸಲಾಗಿದೆ.

ತಾಲ್ಲೂಕಿನ ತೇಗೂರು, ದುರ್ಗದಕೇರಿ ಕೋಟುರು ಸೇರಿದಂತೆ ವಿವಿಧ ಗ್ರಾಮಗಳ ನೂರಾರು ಎಕರೆ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಬೆಳೆ ಫಸಲಿಗೆ ಬಂದಿತ್ತು. ಆದರೆ, ಅಕಾಲಿಕವಾಗಿ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ನೆಲಕ್ಕುರುಳಿದ್ದು, ಗಿಡದಲ್ಲಿ ಶೇ 20 ರಷ್ಟು ಉಳಿದಿರುವ ಕಾಯಿಗಳು ಕೂಡ ಮಾರಾಟಕ್ಕೆ ಬಾರದಂತಾಗಿವೆ.

ADVERTISEMENT

ಈ ಸಂಬಂಧ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ತಾಲ್ಲೂಕಿನ ತೇಗೂರ ಮತ್ತು ಅದರ ಸುತ್ತಲಿನ ಮಾವು ಬೆಳೆದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಪರಿಶೀಲನೆ ಮಾಡಲಾಗಿದೆ. ಈ ಬಗ್ಗೆ ಸಂಪೂರ್ಣವಾಗಿ ಸಮೀಕ್ಷೆ ನಡೆಸಿದ ನಂತರವೇ ಹಾನಿಯಾದ ಪ್ರಮಾಣ ತಿಳಿಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.

ತೇಗೂರು ಗ್ರಾಮದ ರೈತ ಯಲ್ಲಪ್ಪ ಬಾಗೋಡಿ ಪ್ರತಿಕ್ರಿಯಿಸಿ, ‘ನಾನು 30 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಮಾವು ಫಸಲಿಗೆ ಬಂದಿತ್ತು. ಇನ್ನೆರೆಡು ದಿನಗಳಲ್ಲಿ ಕಟಾವು ಮಾಡಲು ಯೋಚಿಸಿದ್ದೆ. ಆದರೆ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಅಕಾಲಿಕ ಮಳೆಗೆ ಸಂಪೂರ್ಣ ನಾಶವಾಗಿದ್ದು, ಸರ್ಕಾರ ಬೇಗ ಪರಿಹಾರ ನೀಡಬೇಕು’ ಎಂದು ಆಗ್ರಹಿಸಿದ್ದಾರೆ.

ಬೆಳೆ ನಷ್ಟವಾಗಿದೆ ಎಂದು ರೈತರು ಆತಂಕ ಪಡುವ ಅಗತ್ಯವಿಲ್ಲ. ಹಾನಿಗೊಳಗಾದ ಪ್ರದೇಶಗಳಿಗೆ ಅಧಿಕಾರಿಗಳ ತಂಡ ಭೇಟಿ ನೀಡಿ, ಪರಿಶೀಲಿಸುತ್ತಿದೆ. ಹಾನಿಯಾದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು. ಈಗಾಗಲೇ ಹವಾಮಾನ ಆಧಾರಿತ ಬೆಳೆಗಳಿಗೆ ಹಾಗೂ ಮಾವಿನ ಬೆಳೆಗೆ ವಿಮೆ ಪಾವತಿಸಿದ ಎಲ್ಲ ರೈತರಿಗೂ ಪರಿಹಾರ ಸಿಗುತ್ತದೆ ಎಂದು ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕಾಶಿನಾಥ ಭದ್ರನ್ನವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.