ಹುಬ್ಬಳ್ಳಿ: ನಗರದ ಮೂರುಸಾವಿರಮಠದ ಪ್ರೌಢಶಾಲೆ ಆವರಣದಲ್ಲಿ ಮೂರು ದಿನಗಳ ಕಾಲ ನಡೆದ ಒಣಮೆಣಸಿನಕಾಯಿ ಮೇಳ ಸೋಮವಾರ ತೆರೆಕಂಡಿತು. ಮೇಳದಲ್ಲಿ ಒಟ್ಟು 33 ಟನ್ ಒಣಮೆಣಸಿನಕಾಯಿ ಮಾರಾಟವಾಗಿದ್ದು, ₹72 ಲಕ್ಷ ವಹಿವಾಟು ನಡೆದಿದೆ.
ಕುಂದಗೋಳ, ಸಂಶಿ ಹಾಗೂ ಅಣ್ಣಿಗೇರಿಯಿಂದ ರೈತರು ಹೆಚ್ಚು ಮೆಣಸಿನಕಾಯಿ ತಂದಿದ್ದರು. ದರ ಹೆಚ್ಚಿದ್ದರಿಂದ ರೈತರಿಗೆ ಲಾಭವೂ ಸಿಕ್ಕಿದೆ ಎಂದು ರಾಜ್ಯ ಸಂಬಾರು ಪದಾರ್ಥಗಳ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ ನಾರಾಯಣಪುರ ‘ಪ್ರಜಾವಾಣಿ’ಗೆ ತಿಳಿಸಿದರು.
ಮೇಳದಲ್ಲಿ ಕಡ್ಡಿ ತಳಿಯ ಮೆಣಸಿನಕಾಯಿ ಹೆಚ್ಚು ಮಾರಾಟವಾಗಿದೆ. ಡಬ್ಬಿ ಇಳುವರಿ ಕಡಿಮೆ ಇದ್ದುದರಿಂದ ಹೆಚ್ಚು ಆವಕವಿರಲಿಲ್ಲ. ಆರೋಗ್ಯದ ಕಾಳಜಿ ವಹಿಸುವವರು ಹಾಗೂ ಖಾರ ಕಡಿಮೆ ತಿನ್ನುವವರಷ್ಟೇ ಡಬ್ಬಿ ಒಣ ಮೆಣಸಿನಕಾಯಿಯನ್ನು ಕೆ.ಜಿ.ಗೆ ₹280ರಂತೆ ಖರೀದಿ ಮಾಡಿದ್ದಾರೆ ಎಂದು ಹೇಳಿದರು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಫಸಲು ಕಡಿಮೆ ಇತ್ತು. ಮಾರುಕಟ್ಟೆಯಲ್ಲಿ ಪ್ರಮಾಣ ಕಡಿಮೆ ಇದ್ದುದರಿಂದ ಗ್ರಾಹಕರು ಖರೀದಿಗೆ ಉತ್ಸಾಹ ತೋರಿದರು. ಉತಾರ ಹಾಗೂ ಆಧಾರ್ ಕಾರ್ಡ್ ಪರಿಶೀಲಿಸಿಯೇ ರೈತರಿಗೆ ಮೇಳದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಕೆಲ ರೈತರು ಬೇರೆಯವರ ಬೆಳೆ ಖರೀದಿಸಿ ತಂದು ಇಲ್ಲಿ ಮಾರಾಟ ಮಾಡಿದ್ದಾರೆ. ವ್ಯಾಪಾರಿಗಳಿಗೆ ನಾವು ಅವಕಾಶ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.