ಹುಬ್ಬಳ್ಳಿ: ಖಾಸಗಿ ಅನುದಾನಿತ ಸಂಯುಕ್ತ ಪದವಿಪೂರ್ವ ಕಾಲೇಜುಗಳಿಂದ ಬೇರ್ಪಟ್ಟ ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಹೊಸದಾಗಿ ಹುದ್ದೆಗಳನ್ನು ಸೃಜಿಸುವ ಕುರಿತು ಸರ್ಕಾರ ಕಾರ್ಯಪ್ರವೃತ್ತವಾಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಕುರಿತು 2013ರಿಂದಲೇ ಪ್ರಸ್ತಾವವಿದ್ದು, ಅನುಮೋದನೆ ನೀಡುವಂತೆ ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು 2022ರ ಮೇ 9ರಂದು ಮಾಹಿತಿಯೊಂದಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಬೇರ್ಪಟ್ಟ ಪದವಿಪೂರ್ವ ಕಾಲೇಜುಗಳಿಗೆ 156 ಪ್ರಾಚಾರ್ಯರು, 1,725 ಉಪನ್ಯಾಸಕರು, 152 ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ 156 ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳನ್ನು ಸೃಜಿಸಿ 156 ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಿಗೆ ಕಾಯಕಲ್ಪ ನೀಡುವದು ಅಗತ್ಯವಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
ಈ ಹುದ್ದೆಗಳ ಸೃಷಿಗೆ ಬೇಕಾಗಬಹುದಾದ ವಾರ್ಷಿಕ ₹201.95 ಕೋಟಿ ಮೊತ್ತವನ್ನು ಶಿಕ್ಷಣ ಇಲಾಖೆಗೆ ಪೂರಕ ಅನುದಾನವಾಗಿ ಒದಗಿಸಬೇಕು. ಒಟ್ಟು 2,189 ಹುದ್ದೆಗಳ ಮಂಜೂರಾತಿಗೆ ಆದೇಶ ಹೊರಡಿಸಬೇಕು ಎಂದು ಆರ್ಥಿಕ ಇಲಾಖೆಗೆ ನಿರ್ದೇಶನ ನೀಡಬೇಕು ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.