ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿವ ಬೆನ್ನಲ್ಲೇ, ಚಿಕಿತ್ಸೆಗೆ ದಾಖಲಿಸಲು ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯ ಸವಾಲು ಎದುರಾಗುವ ಸಾಧ್ಯತೆ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಕಂಡುಕೊಂಡಿರುವ ಜಿಲ್ಲಾಡಳಿತ ಸರ್ಕಾರಿ ವಸತಿ ಶಾಲೆಗಳು, ಹಾಸ್ಟೆಲ್ ಹಾಗೂ ಕೆಲ ಖಾಸಗಿ ಹಾಸ್ಟೆಲ್ಗಳನ್ನು ಹೆಚ್ಚುವರಿ ‘ಕೋವಿಡ್ ಕೇರ್ ಸೆಂಟರ್‘(ಸಿಸಿಸಿ)ಗಳನ್ನು ಸ್ಥಾಪಿಸಲು ಮುಂದಾಗಿದೆ.
ಸರ್ಕಾರದ ಅಧೀನದ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಇರುವ ಶಾಲೆ ಮತ್ತು ವಿದ್ಯಾರ್ಥಿನಿಲಯಗಳು ಹಾಗೂ ಗೋಕುಲ ರಸ್ತೆಯಲ್ಲಿರುವ ದೇಶಪಾಂಡೆ ಫೌಂಡೇಷನ್ ಮತ್ತು ಕೆಎಲ್ಇ ಪ್ರೇರಣಾ ಶಾಲೆಯ ವಸತಿ ನಿಲಯ ಕೂಡ ‘ಕೋವಿಡ್ ಕೇರ್ ಸೆಂಟರ್’ಗಳಾಗಲಿವೆ.
‘ಸದ್ಯ ಹುಬ್ಬಳ್ಳಿಯ ಸಂಜೀವಿನಿ ಆಸ್ಪತ್ರೆ, ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯ, ಗೋಕುಲ ರಸ್ತೆಯ ಎರಡು ವಸತಿ ನಿಲಯಗಳು, ಧಾರವಾಡದ ಸಿ.ಬಿ. ಗುತ್ತಲ ಆಯುರ್ವೇದ ಆಸ್ಪತ್ರೆ, ಬಿ.ಡಿ. ಜತ್ತಿ ಆಸ್ಪತ್ರೆ ಹಾಗೂ ಹಿಂದುಳಿದ ಬಾಲಕಿಯರ ವಸತಿ ನಿಲಯಗಳಲ್ಲಿ ಸಿಸಿಸಿಗಳಾಗಿ ಮಾರ್ಪಡಿಸಲಾಗಿದೆ. ಇಲ್ಲಿ 328 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಉಪ ವಿಭಾಗಾಧಿಕಾರಿ ಮಹಮದ್ ಜುಬೇರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
‘ಕೊರೊನಾ ಸೋಂಕಿನ ಲಕ್ಷಣಗಳು ಇಲ್ಲದಿದ್ದರೂ, ಕೆಲವರಲ್ಲಿ ಕೋವಿಡ್ ಕಾಣಿಸಿಕೊಳ್ಳುತ್ತಿದೆ. ಅಂತಹವರನ್ನು ಇಂತಹ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಇರಿಸಲಾಗುವುದು. ಸೂಕ್ತ ಚಿಕಿತ್ಸೆ ಜತೆಗೆ, ಆರೋಗ್ಯದ ಮೇಲೆ ನಿಗಾ ವಹಿಸಲಾಗುವುದು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ’ ಎಂದರು.
‘ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಹದಿಮೂರು ಸರ್ಕಾರಿ ಹಾಸ್ಟೆಲ್ಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗಿತ್ತು. ಹೊರ ರಾಜ್ಯ ಹಾಗೂ ಜಿಲ್ಲೆಗಳ ಜನರನ್ನು ಅಲ್ಲಿ 14ರಿಂದ 28 ದಿನಗಳವರೆಗೆ ಕ್ವಾರಂಟೈನ್ನಲ್ಲಿ ಇಡಲಾಗಿತ್ತು. ಈಗ ಸಿಸಿಸಿಗಳಾಗಿ ಪರಿವರ್ತಿಸಲಾಗುತ್ತಿದೆ’ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಎನ್.ಆರ್. ಪುರುಷೋತ್ತಮ್ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.