ADVERTISEMENT

ಆರ್‌ಟಿಇ: ಶಾಲಾ ಪ್ರವೇಶಕ್ಕೆ ಪೋಷಕರ ನಿರಾಸಕ್ತಿ

ಕನ್ನಡ ಮಾಧ್ಯಮದತ್ತ ಸುಳಿಯದ ಪೋಷಕರು

ಬಸವರಾಜ ಹವಾಲ್ದಾರ
Published 4 ಅಕ್ಟೋಬರ್ 2020, 20:24 IST
Last Updated 4 ಅಕ್ಟೋಬರ್ 2020, 20:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
""

ಹುಬ್ಬಳ್ಳಿ: ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶ ಕೊಡಿಸಲು ಪೋಷಕರು ನಿರಾಸಕ್ತಿ ತೋರಿದ್ದಾರೆ.

ರಾಜ್ಯದಾದ್ಯಂತ ಆರ್‌ಟಿಇ ಅಡಿಯಲ್ಲಿ 17,453 ಸೀಟುಗಳು ಲಭ್ಯವಿದ್ದರೂ 3,680 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. 13,773 ಸೀಟುಗಳು ಖಾಲಿ ಉಳಿದಿವೆ. ಲಭ್ಯವಿರುವ ಒಟ್ಟು ಸೀಟುಗಳ ಪೈಕಿ 10,100 ಸೀಟುಗಳಿಗೆ ಪೋಷಕರು ಅರ್ಜಿಯನ್ನೇ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿ ಪ್ರವೇಶಕ್ಕೆ ಆಯ್ಕೆಯಾಗಿದ್ದ 7,353 ವಿದ್ಯಾರ್ಥಿಗಳಲ್ಲಿಯೂ 3,673 ವಿದ್ಯಾರ್ಥಿಗಳು ಪ್ರವೇಶ ಪಡೆದಿಲ್ಲ.

ಕನ್ನಡ ಮಾಧ್ಯಮ ಹೊಂದಿರುವ ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿನ ಆರ್‌ಟಿಇ ಖೋಟಾದ ಸೀಟುಗಳಿಗೆ ಮಕ್ಕಳನ್ನು ದಾಖಲಿಸಲು ಪೋಷಕರು ನಿರಾಸಕ್ತಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಇಂಗ್ಲಿಷ್‌ ಮಾಧ್ಯಮದ 7,353 ಸೀಟುಗಳೂ ಭರ್ತಿಯಾಗಿಲ್ಲ.

ADVERTISEMENT

ವಾರ್ಡ್‌ವಾರು ಶಾಲೆಗಳ ಆಯ್ಕೆಗೆ ಅವಕಾಶ ಮಾಡಿದ ಮೇಲೆ ಶಾಲೆಗಳ ಆಯ್ಕೆಯ ವ್ಯಾಪ್ತಿ ಹೆಚ್ಚಾಗಿದೆ. ಹೀಗಾಗಿ, ಪೋಷಕರು ತಮ್ಮ ಮಕ್ಕಳಿಗೆ ಪ್ರವೇಶ ಬಯಸಿ ಅರ್ಜಿ ಸಲ್ಲಿಸುತ್ತಾರೆ. ಆಯ್ಕೆಯಾದ ನಂತರ ಪ್ರವೇಶ ಪಡೆಯದೆ, ಮನೆ ಹತ್ತಿರದ ಮತ್ತೊಂದು ಶಾಲೆಗೆ ದಾಖಲಿಸುತ್ತಿದ್ದಾರೆ.

ಕೋವಿಡ್‌ ಸಹ ಕಾರಣ: ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯದಿರುವುದಕ್ಕೆ ಕೋವಿಡ್‌–19 ಸಹ ಕಾರಣವಾಗಿದೆ. ಶಾಲೆಗಳು ಆರಂಭವಾಗುವುದೇ ಅನುಮಾನವಿದೆ. ಜೊತೆಗೆ ಸಣ್ಣ ಮಕ್ಕಳನ್ನು ದೂರದ ಶಾಲೆಗಳಿಗೆ ಕಳುಹಿಸುವುದು ಹೇಗೆ ಎಂಬ ಕಾರಣಕ್ಕೆ ಕೆಲ ಪೋಷಕರು ಅರ್ಜಿ ಹಾಕಲೂ ಹಿಂದೇಟು ಹಾಕಿದ್ದಾರೆ ಎಂದು ಹೆಸರು ಹೇಳಲು ಬಯಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೀದರ್ ಜಿಲ್ಲೆಯಲ್ಲಿ 31, ಬೆಂಗಳೂರು ಉತ್ತರ ಜಿಲ್ಲೆಯಲ್ಲಿ 5, ಹಾಸನ ಜಿಲ್ಲೆಯಲ್ಲಿ 3, ರಾಮನಗರ ಜಿಲ್ಲೆಯಲ್ಲಿ 7 ವಿದ್ಯಾರ್ಥಿಗಳು ಮಾತ್ರ ಆರ್‌ಟಿಇ ಅಡಿ ಪ್ರವೇಶ ಪಡೆದಿದ್ದಾರೆ.

ಆರ್‌ಟಿಇ ಪ್ರವೇಶದ ಮೊದಲ ಸುತ್ತಿನಲ್ಲಿ 5,912 ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಮಾಡಲಾಗಿತ್ತು. ಈ ಪೈಕಿ 3,089 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಎರಡನೇ ಸುತ್ತಿನಲ್ಲಿ 1,441 ವಿದ್ಯಾರ್ಥಿಗಳ ಪೈಕಿ 591 ವಿದ್ಯಾರ್ಥಿಗಳು ಮಾತ್ರ ಪ್ರವೇಶ ಪಡೆದಿದ್ದಾರೆ. ಇನ್ನೂ ಒಂದು ವಾರ ಪ್ರವೇಶಕ್ಕೆ ಅವಕಾಶವಿದೆ. ಮೂರನೇ ಸುತ್ತಿನ ಹಂಚಿಕೆ ಇರುವುದಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.