ಧಾರವಾಡ: ‘ಕರ್ನಾಟಕ ಏಕೀಕರಣಕ್ಕೆ ಕಾರಣವಾದ 133 ವರ್ಷಗಳ ಇತಿಹಾಸವಿರುವ ವಿದ್ಯಾವರ್ಧಕ ಸಂಘವು, ಈಗ ರಾಜ್ಯ ವಿಭಜನೆಗೂ ಕಾರಣವಾಗಬಹುದು’ ಎಂದು ಮಾಜಿ ಮೇಯರ್ ಡಾ. ಪಾಂಡುರಂಗ ಪಾಟೀಲ ಹೇಳಿದರು.
ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಮವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿ ಆಗಬೇಕು. ಆದರೆ ಈ ಕುರಿತೇ ಜನರಲ್ಲಿ ಅನುಮಾನವಿದೆ. ರಾಜ್ಯ ಭೌಗೋಳಿಕವಾಗಿ ಅಭಿವೃದ್ಧಿಯಾದರೆ ಸಾಲದು. ಜನಾಂಗೀಯವಾಗಿಯೂ ಅಭಿವೃದ್ಧಿ ಕಾಣಬೇಕು. ಸಚಿವ ಉಮೇಶ ಕತ್ತಿ ಅವರು ಉತ್ತರ ಕರ್ನಾಟಕ ರಾಜ್ಯ ರಚನೆ ಕುರಿತು ಮಾತನಾಡಿದರೆ ಅದನ್ನು ಕೆಲವರು ಹಗುರವಾಗಿ ಸ್ವೀಕರಿಸುತ್ತಾರೆ. ಆದರೆ ಒಂದೊಮ್ಮೆ ಅಂಥ ವಿಭಜನೆ ಕಾಲ ಬಂದಲ್ಲಿ, ಅದನ್ನು ಅನಿವಾರ್ಯವಾಗಿ ಸ್ವೀಕರಿಸಲೇಬೇಕಬಹುದು’ ಎಂದರು.
‘ಗೋಕಾಕ್ ಚಳವಳಿ ಸಂದರ್ಭದಲ್ಲಿ ಸರ್ಕಾರವನ್ನೇ ಬದಲಿಸಿದ್ದ ವಿದ್ಯಾವರ್ಧಕ ಸಂಘವು ಈಗ ಅನುದಾನಕ್ಕಾಗಿ ಅಂಗಲಾಚುವ ಸ್ಥಿತಿಯಲ್ಲಿದೆ ಎಂದರೆ, ಉತ್ತರ ಕರ್ನಾಟಕದ ನಿರ್ಲಕ್ಷಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ’ ಎಂದು ಡಾ. ಪಾಟೀಲ ಹೇಳಿದರು.
ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಕೋಶಾಧ್ಯಕ್ಷ ಶಿವಾನಂದ ಭಾವಿಕಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.