
ಹುಬ್ಬಳ್ಳಿ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿತ್ತು.
ನಗರದ ದುರ್ಗದಬೈಲ್, ಸಂಗೊಳ್ಳಿ ರಾಯಣ್ಣ ವೃತ್ತ, ಜನತಾಬಜಾರ್, ಲಿಂಗರಾಜನಗರ, ಗೋಕುಲ ರಸ್ತೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿ ಹೂವು, ಕಬ್ಬು, ಕುಸುರೆಳ್ಳು, ಬೆಲ್ಲ, ಶೇಂಗಾ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಜನರು ಖರೀದಿಸಿದರು.
ಹಬ್ಬದಲ್ಲಿ ಕಬ್ಬು ಬೀರುವ ಸಂಪ್ರದಾಯ ಇರುವ ಕಾರಣ ಕಬ್ಬಿಗೂ ಹೆಚ್ಚು ಬೇಡಿಕೆ ಇದ್ದುದು ಕಂಡು ಬಂತು. ಹಬ್ಬಕ್ಕೆ ಬೇಕಾದ ಸಾಮಗ್ರಿಗಳು, ಎಳ್ಳು, ಬೆಲ್ಲ ಹಾಗೂ ಕೊಬ್ಬರಿ ಮಿಶ್ರಣ, ಕುಸುರೆಳ್ಳನ್ನು ಜನರು ವಿತರಣೆಗೆಂದು ಖರೀದಿ ಮಾಡಿದರು.,
ನಗರದ ಕೆಲವು ಕಡೆ ಬುಧವಾರ ಸಂಕ್ರಾಂತಿ ಹಬ್ಬ ಆಚರಿಸಲಾಯಿತು. ಮನೆಯಲ್ಲಿ ವಿವಿಧ ಬಗೆಯ ಖಾದ್ಯ ತಯಾರಿಸಿಕೊಂಡು ಕುಟುಂಬ ಸದಸ್ಯರು, ಬಂದುಗಳೊಂದಿಗೆ ಉಣಕಲ್ ಕೆರೆ ಉದ್ಯಾನ, ಇಂದಿರಾ ಗಾಜಿನ ಮನೆಯ ಉದ್ಯಾನ, ನೃಪತುಂಗ ಬೆಟ್ಟ, ತೋಳನಕೆರೆ ಸೇರಿದಂತೆ ತಮಗಿಷ್ಟದ ಸ್ಥಳಗಳಿಗೆ ತೆರಳಿ ಊಟ ಸವಿದರು.
ಮಾರುಕಟ್ಟೆಯಲ್ಲಿ ಸಜ್ಜೆ ರೊಟ್ಟಿಗೆ ಬೇಡಿಕೆ: ಹಬ್ಬದಂದು ಮನೆಯಲ್ಲಿ ಬಗೆಬಗೆಯ ಖಾದ್ಯಗಳ ತಯಾರಿ ಜೋರಾಗಿರುತ್ತದೆ. ಅದರಲ್ಲೂ ಸಂಕ್ರಾಂತಿಗೆ ಸಜ್ಜೆ ರೊಟ್ಟೆ ಬೇಕೇ ಬೇಕು. ಸಾಮಾನ್ಯವಾಗಿ ಮನೆಯಲ್ಲಿ ಈ ರೊಟ್ಟಿಗಳನ್ನು ತಯಾರಿಸುತ್ತಾರೆ. ಆದರೆ, ರೊಟ್ಟಿಗಳು ಮಾರಾಟಕ್ಕೆ ಸಿಗುವುದರಿಂದ ಸಂಕ್ರಾಂತಿಯಂದು ಸವಿಯುವ ಸಜ್ಜೆ, ಎಳ್ಳು ಹಚ್ಚಿದ ರೊಟ್ಟಿಗಳಿಗೆ ಭಾರಿ ಬೇಡಿಕೆ ಇತ್ತು. ಒಂದು ರೊಟ್ಟಿಗೆ ₹8 ರಿಂದ ₹10 ವರೆಗೆ ದರ ಇತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.