ಹುಬ್ಬಳ್ಳಿ: ಲೆಕ್ಕಪತ್ರಗಳ ನಿರ್ವಹಣೆ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ ಹುಬ್ಬಳ್ಳಿ ವಿಭಾಗಕ್ಕೆ ನೈರುತ್ಯ ರೈಲ್ವೆಯ ಏಳು ವಾರ್ಷಿಕ ಪ್ರಶಸ್ತಿ ಲಭಿಸಿವೆ.
ನೈರುತ್ಯ ರೈಲ್ವೆಯು ತನ್ನ ಕಾರ್ಯವ್ಯಾಪ್ತಿಯ ವಿಭಾಗಗಳಲ್ಲಿ ಗುಣಮಟ್ಟ ಮತ್ತು ದಕ್ಷತೆ ಹೆಚ್ಚಿಸುವ ಸಲುವಾಗಿ ಪ್ರತಿ ವರ್ಷ ಅಂತರ ವಲಯಗಳ ನಡುವೆ ಸ್ಪರ್ಧೆ ಏರ್ಪಡಿಸುತ್ತದೆ. ಮಂಗಳವಾರ ನಗರದಲ್ಲಿ ನಡೆದ 65ನೇ ರೈಲ್ವೆ ಸಪ್ತಾಹ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಗಳನ್ನು ನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ ಸಿಂಗ್ ಪ್ರದಾನ ಮಾಡಿದರು.
ಉತ್ತಮ ಸಾಧನೆ ತೋರಿದ ವಿಭಾಗ ಮತ್ತು ವೈಯಕ್ತಿಕ ಪುರಸ್ಕಾರ ಅಧಿಕಾರಿಗಳಿಗೆ ನೀಡಲಾಯಿತು.
ಹುಬ್ಬಳ್ಳಿ ವಿಭಾಗವು ಯಾಂತ್ರಿಕ ದಕ್ಷತೆ, ಅಂತರ ವಿಭಾಗೀಯ ಸುರಕ್ಷತೆ, ಕಾರ್ಯಾಗಾರಗಳ ಸಮರ್ಥ ನಿರ್ವಹಣೆ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ಡಿಸೇಲ್ ಶೆಡ್ ಡಿಪೊದಲ್ಲಿ ಮಳಿಗೆಗಳ ಸಮಗ್ರ ನಿರ್ವಹಣೆ ತೋರಿದ ಕಾರಣಕ್ಕೆ ಹುಬ್ಬಳ್ಳಿ ಮತ್ತು ಕೃಷ್ಣರಾಜಪುರಂ ವಿಭಾಗ ಜಂಟಿಯಾಗಿ ಪ್ರಶಸ್ತಿ ಹಂಚಿಕೊಂಡಿವೆ. ‘ರನ್ನಿಂಗ್ ರೂಮ್’ (ಲೊಕೊ ಪೈಲಟ್ಗಳು ಉಳಿದುಕೊಳ್ಳುವ ಜಾಗ) ಅತ್ಯುತ್ತಮ ನಿರ್ವಹಣೆ ಮಾಡಿದ ಕಾರಣಕ್ಕೆ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಬೆಳಗಾವಿಗೂ ಫಲಕ ಲಭಿಸಿದೆ.
ಅಜಯಕುಮಾರ ಸಿಂಗ್ ಮಾತನಾಡಿ ‘ನೈರುತ್ಯ ರೈಲ್ವೆ ಯಾವಾಗಲೂ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ಸುರಕ್ಷತೆ ಮೊದಲು ಎನ್ನುವುದು ನಮ್ಮ ಧ್ಯೇಯ. ಕಳೆದ ವರ್ಷ 185.46 ಮಿಲಿಯನ್ ಪ್ರಯಾಣಿಕರು ನೈರುತ್ಯ ರೈಲ್ವೆಯಲ್ಲಿ ಪ್ರಯಾಣಿಸಿದ್ದಾರೆ. ಇದರಿಂದ ₹2,116 ಕೋಟಿ ಸಂಗ್ರಹವಾಗಿದ್ದು, ಅದಕ್ಕೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 2.33ರಷ್ಟು ಹೆಚ್ಚು ಗಳಿಕೆಯಾಗಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.