ಧಾರವಾಡ: ‘ನವೋದಯ ಪೂರ್ವಕಾಲ ಘಟ್ಟದಲ್ಲಿ ಕನ್ನಡ ಸಾಹಿತ್ಯ ರೂಪುಗೊಳ್ಳಲು ಇಂಗ್ಲಿಷ್ ಕೃತಿಗಳ ಅನುವಾದ ಮಹತ್ವದ ಪಾತ್ರ ನಿರ್ವಹಿಸಿತು. ಶೇಕ್ಸ್ಪಿಯರ್ ನಾಟಕಗಳು ಕನ್ನಡ ಸಾಹಿತ್ಯ ಮತ್ತು ರಂಗಭೂಮಿಯಲ್ಲಿ ಸಂಚಲನ ಮೂಡಿಸಿದವು. ವಸ್ತು, ಸಂವೇದನೆ, ಭಾಷೆ, ಶೈಲಿ ಕನ್ನಡ ಸಾಹಿತ್ಯದ ಸಾಧ್ಯತೆಗಳನ್ನು ಹೆಚ್ಚಿಸಿದವು’ ಎಂದು ರಾಯಚೂರಿನ ವಾಲ್ಮೀಕಿ ವಿ.ವಿ ಕುಲಪತಿ ಪ್ರೊ. ಶಿವಾನಂದ ಕೆಳಗಿನಮನಿ ಅಭಿಪ್ರಾಯ ವ್ಯಕ್ತಪಡಿಸಿದರು. .
ಬೆಂಗಳೂರಿನ ಸಿವಿಜಿ ಪಬ್ಲಿಕೇಷನ್ಸ್, ಮತ್ತು ವಾಲ್ಮೀಕಿ ವಿ.ವಿ, ಧಾರವಾಡ ಕಟ್ಟೆ ವತಿಯಿಂದ ನಡೆದ ಶೇಕ್ಸ್ಪಿಯರ್ ನಾಟಕಗಳ ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡಿಗರು ಶೇಕ್ಸ್ಪಿಯರ್ ನಾಟಕಗಳನ್ನು ವಿಶಿಷ್ಟವಾದ ರೀತಿಯಲ್ಲಿ ಸ್ವಾಗತಿಸಿದರು. ಕನ್ನಡದ ಪ್ರಜ್ಞಾವಲಯವನ್ನು ವಿಸ್ತರಿಸುವಲ್ಲಿ ಶೇಕ್ಸ್ಪಿಯರ್ ನಾಟಕಗಳು ಮಹತ್ವದ ಪಾತ್ರ ವಹಿಸಿದವು ಎಂದರು.
ಲೇಖಕ ಆರ್.ಜಿ.ಹೆಗಡೆ ಮಾತನಾಡಿ, ಜಗತ್ತಿನ ಬಗ್ಗೆ ಎದೆ ಬಿಚ್ಚಿ ಮಾತನಾಡಿದ ಶೇಕ್ಸ್ಪಿಯರ್ ತನ್ನ ಬಗ್ಗೆ ಒಂದು ಶಬ್ದವನ್ನೂ ಆಡಿಲ್ಲ. ಹುಡುಕಾಟ ಅವರ ನಾಟಕಗಳ ಪ್ರಧಾನ ಆಶಯವಾಗಿತ್ತು. ಶೇಕ್ಸ್ಪಿಯರ್ ಜಗತ್ತಿನ ಅಂತರಂಗ ಅರಿಯಲು ಪ್ರಯತ್ನಿಸಿದರು ಎಂದು ಹೇಳಿದರು.
ಪ್ರೊ.ಬಸವರಾಜ ಡೋಣೂರ ಮಾತನಾಡಿ, ಭಾರತೀಯ ಅನೇಕ ತಾತ್ವಿಕ, ಸಾಮಾಜಿಕ, ಧಾರ್ಮಿಕ, ನೈತಿಕ, ರಾಜಕೀಯ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಬಿಕಟ್ಟುಗಳಿಗೆ ಶೇಕ್ಸ್ಪಿಯರ್ ನಾಟಕಗಳು ಪರಿಹಾರ ಸೂಚಿಸುತ್ತವೆ ಎಂದರು.
ವೆಂಕಟಗಿರಿ ದಳವಾಯಿ, ವಿಜಯಕುಮಾರ್ ಕಟಗಿಹಳ್ಳಿಮಠ, ಡಿ.ಎಂ.ಹಿರೇಮಠ, ಸಿವಿಜಿ ಚಂದ್ರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.