ADVERTISEMENT

ಲಾಕ್‌ಡೌನ್‌ನಿಂದ ನಷ್ಟ| ಪ್ಯಾಕೇಜ್‌ ನೀಡಲು ಶಾಮಿಯಾನ ಮಾಲೀಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 8:30 IST
Last Updated 13 ಆಗಸ್ಟ್ 2020, 8:30 IST
ಕಾರ್ಯಕ್ರಮವೊಂದಕ್ಕೆ ಸಜ್ಜಾಗುತ್ತಿರುವ ಶಾಮಿಯಾನ (ಪ್ರಾತಿನಿಧಿಕ ಚಿತ್ರ)
ಕಾರ್ಯಕ್ರಮವೊಂದಕ್ಕೆ ಸಜ್ಜಾಗುತ್ತಿರುವ ಶಾಮಿಯಾನ (ಪ್ರಾತಿನಿಧಿಕ ಚಿತ್ರ)   

ಹುಬ್ಬಳ್ಳಿ: ಕೋವಿಡ್‌ ಹಾಗೂ ಲಾಕ್‌ಡೌನ್‌ನಿಂದಾಗಿ ಬಹಳಷ್ಟು ಕಾರ್ಯಕ್ರಮಗಳು ನಡೆಯದ ಕಾರಣ ಶಾಮಿಯಾನ ಕೆಲಸವನ್ನು ನೆಚ್ಚಿಕೊಂಡವರ ಬದುಕು ಬೀದಿಗೆ ಬಿದ್ದಿದೆ. ಆದ್ದರಿಂದ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಿಸಬೇಕು ಎಂದು ರಾಜ್ಯ ಶಾಮಿಯಾನ ಡೆಕೋರೇಷನ್‌ ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಸಾಮಾನ್ಯವಾಗಿ ಪ್ರತಿ ವರ್ಷ ಫೆಬ್ರುವರಿಯಿಂದ ಜೂನ್‌ ತನಕ ಮದುವೆ ಹಾಗೂ ಇನ್ನಿತರ ಶುಭ ಕಾರ್ಯಕ್ರಮಗಳು ನಡೆಯುತ್ತಿದ್ದವು. ಆಗ ನಮಗೆ ಭರ್ಜರಿ ದುಡಿಮೆಯಿರುತ್ತಿತ್ತು. ಈ ಬಾರಿ ಕಾರ್ಯಕ್ರಮಗಳು ನಡೆಯದ ಕಾರಣ ಬಹಳಷ್ಟು ತೊಂದರೆಯಾಗಿದೆ. ರಾಜ್ಯ ಸರ್ಕಾರ ಎಲ್ಲ ಕಾರ್ಮಿಕ ವರ್ಗದವರಿಗೆ ಪ್ಯಾಕೇಜ್‌ ಘೋಷಿಸಿದ್ದು, ನಮಗೂ ಈ ಸೌಲಭ್ಯ ಕಲ್ಪಿಸಬೇಕು ಎಂದು ಸಂಘದ ಅಧ್ಯಕ್ಷ ಶಿವುಕುಮಾರ ಹಿರೇಮಠ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಶಾಮಿಯಾನ ಉದ್ಯೋಗವನ್ನು ಕೇಂದ್ರ ಸರ್ಕಾರ ಸಣ್ಣ ಕೈಗಾರಿಕೆಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದು, ರಾಜ್ಯ ಸರ್ಕಾರ ಕೂಡ ಇದರ ಬಗ್ಗೆ ಕ್ರಮ ಕೈಗೊಳ್ಳಬೇಕು. ನಷ್ಟ ಸರಿದೂಗಿಸಲು ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವಂತೆ ಬ್ಯಾಂಕ್‌ಗಳಿಗೆ ಸೂಚಿಸಬೇಕು, ಸಾರ್ವಜನಿಕ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆಗೆ ಮುಕ್ತವಾಗಿ ಅವಕಾಶ ಕೊಟ್ಟರೆ ರಾಜ್ಯದಲ್ಲಿರುವ ಎಂಟು ಲಕ್ಷಕ್ಕೂ ಹೆಚ್ಚಿರುವ ಶಾಮಿಯಾನ ಉದ್ಯಮದ ಮಾಲೀಕರಿಗೆ ಹಾಗೂ ಸಿಬ್ಬಂದಿಗೆ ನೆರವು ನೀಡಿದಂತಾಗುತ್ತದೆ ಎಂದು ಅವರು ಮನವಿ ಮಾಡಿದರು.

ADVERTISEMENT

ಸಂಘದ ಕಾರ್ಯದರ್ಶಿ ವಿಶಾಲ ವಾಘ್ಮೋಡೆ, ಖಜಾಂಚಿ ಅಬ್ದುಲ್‌ ಖಾದರ್‌ ಗುಡಗೇರಿ, ಸಂಘಟನಾ ಕಾರ್ಯದರ್ಶಿ ಇಮ್ರಾನ್‌ ಆಧೋನಿ, ಸದಸ್ಯರಾದ ಮಂಜುನಾಥ ಹುಲ್ಲೆಪ್ಪನವರ, ಚಂದ್ರ ಹಿರೇಮಠ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.