ADVERTISEMENT

ದುರಂತದ ಸ್ಥಳದಲ್ಲಿ 6ರಂದು ಶ್ರದ್ಧಾಂಜಲಿ

ಬೈಪಾಸ್‌ ರಸ್ತೆಯ ನ್ಯೂನ್ಯತೆ ಸರಿಪಡಿಸಲು ಮಾರ್ಚ್‌ 18 ಗಡುವು

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2021, 11:26 IST
Last Updated 4 ಫೆಬ್ರುವರಿ 2021, 11:26 IST

ಹುಬ್ಬಳ್ಳಿ: ಸ್ನೇಹಿತೆಯರೊಂದಿಗೆ ಪ್ರವಾಸಕ್ಕೆ ತೆರಳುತ್ತಿದ್ದ ವೇಳೆ ಇಟಗಟ್ಟಿ ಬಳಿಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರಿಗೆ ಅವರ ಕುಟುಂಬದ ಸದಸ್ಯರು ಹಾಗೂ ಸ್ನೇಹಿತರು ಫೆ. 6ರಂದು ಬೆಳಿಗ್ಗೆ 10 ಗಂಟೆಗೆ ಘಟನೆ ನಡೆದ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

ಈ ಕುರಿತು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಕಾಂಗ್ರೆಸ್ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ ‘ಅಂದು ಅವರ ಕುಟುಂಬದವರು ಘಟನಾ ಸ್ಥಳದಲ್ಲಿ ಪೂಜೆ ಸಲ್ಲಿಸಿ, ಮೌನಾಚರಣೆ ಮಾಡಲಿದ್ದಾರೆ. ಈ ವೇಳೆ ಸ್ಥಳೀಯರು, ವಿವಿಧ ಸಂಘಟನೆಯವರು ಭಾಗವಹಿಸಬೇಕು’ ಎಂದರು. ಬೈಪಾಸ್‌ ತಡೆ ನಡೆದರೂ ಅಚ್ಚರಿಯಿಲ್ಲ ಎಂದರು.

ಬೈ ಪಾಸ್‌ನಲ್ಲಿರುವ ದೋಷಗಳನ್ನು ಹೆದ್ದಾರಿ ಪ್ರಾಧಿಕಾರದವರು, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳುಮಾರ್ಚ್‌ 18ರ ಒಳಗೆ ಸರಿಪಡಿಸಬೇಕು. ಇಲ್ಲವಾದರೆ ಕಠಿಣ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ವೈದ್ಯ ಕುಟುಂಬದವರು ಅಪಘಾತದಲ್ಲಿ ಮೃತಪಟ್ಟಾಗ ಪೊಲೀಸರು ಹಾಗೂ ಬೈಪಾಸ್‌ ನಿರ್ವಹಣೆ ಮಾಡುವವರು ಅಮಾನವೀಯವಾಗಿ ನಡೆದುಕೊಂಡಿದ್ದಾರೆ. ಕಾರ್ಯಾಚರಣೆ ಹಾಗೂ ಇನ್ನಿತರ ಕಾರ್ಯಕ್ಕೆಮೃತ ವ್ಯಕ್ತಿಗಳ ಸಂಬಂಧಿಕರಿಂದಲೇ ಹಣ ಪಡೆದರು. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಂದ ಟೋಲ್‌ ಸಂಗ್ರಹಿಸಲಾಗುತ್ತದೆ. ಅಲ್ಲಿ ಅವಘಡ ನಡೆದರೆ ಟೋಲ್‌ ಸಂಗ್ರಹಿಸುವವರೇ ಎಲ್ಲ ಸೌಲಭ್ಯಗಳನ್ನು ಒದಗಿಸಬೇಕು’ ಎಂದು ಒತ್ತಾಯಿಸಿದರು.

’ಭೂ ಸ್ವಾಧೀನಕ್ಕೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಹೆದ್ದಾರಿಯನ್ನು ಆರು ಪಥಗಳ ರಸ್ತೆಯನ್ನಾಗಿ ಮಾಡಲು ವಿಳಂಬ ಮಾಡಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಬಳಸಿಕೊಂಡು ರಸ್ತೆ ನಿರ್ಮಾಣ ಆರಂಭಿಸಿದರೆ ಅತ್ಯಂತ ಕಡಿಮೆ ಅವಧಿಯಲ್ಲಿ ಮುಗಿಸಬಹುದು. ಆದ್ದರಿಂದ ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಹೆದ್ದಾರಿ ಪ್ರಾಧಿಕಾರದವರು ಇಚ್ಛಾಶಕ್ತಿ ಪ್ರದರ್ಶಿಸಿ ತ್ವರಿತಗತಿಯಲ್ಲಿ ಈ ಕೆಲಸ ಮುಗಿಸಬೇಕು’ ಎಂದು ಆಗ್ರಹಿಸಿದರು.

ವೈದ್ಯ ಎಂ.ಜಿ. ಜೇಡರ ಮಾತನಾಡಿ ‘ಬಿಆರ್‌ಟಿಎಸ್‌ನ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಹುಬ್ಬಳ್ಳಿ–ಧಾರವಾಡದ ನಡುವೆ ಜನ ಓಡಾಡುವುದು ಕಷ್ಟವಾಗಿದೆ. ಇದರಿಂದಾಗಿ ಬೈಪಾಸ್‌ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿದೆ. ಅಪಘಾತಗಳೂ ಹೆಚ್ಚುತ್ತಿವೆ’ ಎಂದು ದೂರಿದರು. ಹೋರಾಟಗಾರ ಶ್ರೀಶೈಲಗೌಡ ಪಾಟೀಲ ಕಮತರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.