ಹುಬ್ಬಳ್ಳಿ: ಧಾರವಾಡದಲ್ಲಿ ಜನವರಿ 8 ಮತ್ತು 9ರಂದು ನಡೆಯಲಿರುವ ರಾಜ್ಯಮಟ್ಟದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಪೂರ್ವಭಾವಿಯಾಗಿ ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟದ ಧಾರವಾಡ ಘಟಕ ನಗರದಲ್ಲಿ ಶುಕ್ರವಾರ ‘ಕಪ್ಪು ಉಡುಪಿನಲ್ಲಿ ಮಹಿಳೆಯರು’ ಮೌನ ಪ್ರತಿಭಟನೆ ನಡೆಸಿತು.
ಸಂಘಟನೆಯ ಸದಸ್ಯರು, ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಭಾಗವಹಿಸಿ ಒಂದು ಗಂಟೆಗಳ ಕಾಲ ಮೊಂಬತ್ತಿ ಬೆಳಗಿ ಶಾಂತಿ ಸಂದೇಶ ಸಾರಿದರು. ಎಲ್ಲ ಸಮುದಾಯ, ಸಂಸ್ಕೃತಿಗಳ ನಿತ್ಯ ಬದುಕಿನ ಭಾಗವಾಗಿರುವ ಹಿಂಸೆಯನ್ನು ವಿರೋಧಿಸುವುದು ಈ ಮೌನಾಚರಣೆಯ ಧ್ಯೇಯವಾಗಿತ್ತು.
ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ‘ಅತ್ಯಾಚಾರಿಗಳು ಮಾನವರಲ್ಲ ಅನಾಚಾರಿಗಳು’, ‘ಅತ್ಯಾಚಾರಿಗಳು ರೋಗಿಗಳು ಅವರಿಗೆ ಚಿಕಿತ್ಸೆ ಬೇಕು’, ‘ಅಶ್ಲೀಲ ಸಾಹಿತ್ಯ– ಸಿನಿಮಾ ನಿಷೇಧಿಸಿ’, ‘ಮಕ್ಕಳ ಮೇಲಿನ ಲೈಂಗಿಕ ಹಿಂಸೆ ನಿಲ್ಲಲಿ’, ’ಹೆಣ್ಣು ನೊಂದರೆ ಜಗವು ಬೆಂದೀತು’ ಎಂಬ ಬರಹಗಳಿದ್ದ ಫಲಕಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
8ರಂದು ನಡೆಯುವ ಕಾರ್ಯಕ್ರಮದಲ್ಲಿ ‘ಮಹಿಳೆ ಮತ್ತು ರಾಜಕೀಯ ಪ್ರಜ್ಞೆ’ ವಿಷಯ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಅಮರ್ಜಿತ್ ಕೌರ್ ಭಾಷಣ ಮಾಡುವರು. ಸಂಜೆ ಮೌನ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. 9ರಂದು ಜಾಥಾ ಮತ್ತು ಸಾರ್ವಜನಿಕ ಸಭೆ ನಡೆಯಲಿದೆ. ಸುಮಾರು 10 ಸಾವಿರ ಮಹಿಳೆಯರು ಭಾಗವಹಿಸುವ ನಿರೀಕ್ಷೆ ಇದೆ.
ಹೋರಾಟಗಾರರಾದ ದು. ಸರಸ್ವತಿ, ಶಾರದಾ ಗೋಪಾಲ, ಸುನಂದಾ ಕಡಮೆ, ರಜನಿ ಗರುಡ, ಲಿನೆಟ್ ಡಿಸಿಲ್ವಾ, ಶಾರದಾ ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.