ಹುಬ್ಬಳ್ಳಿ: ನಂಜನಗೂಡು ಶ್ರೀ ರಾಘವೇಂದ್ರಸ್ವಾಮಿಗಳವರ ಮಠದಲ್ಲಿ ಲೋಕ ಕಲ್ಯಾಣರ್ಥವಾಗಿ ಬುಧವಾರ ನಡೆದ ವೈಭವದ ಶ್ರೀನಿವಾಸ ಕಲ್ಯಾಣಕ್ಕೆ ಅಪಾರ ಭಕ್ತ ಸಮೂಹ ಸಾಕ್ಷಿಯಾಯಿತು.
ಅದ್ಧೂರಿ ಮಂಟಪ, ಮಂತ್ರ, ಜಯಘೋಷಗಳು ಭಕ್ತರನ್ನು ಭಾವಪರವಶರನ್ನಾಗಿಸಿತು. ಸುಮಾರು ಮೂರು ಗಂಟೆಗಳ ಕಾಲ ನಡೆದ ಕಲ್ಯಾಣೋತ್ಸವ ಸಂಭ್ರಮ ಸ್ಮೃತಿಪಟಲದಲ್ಲಿ ಅಚ್ಚಾಯಿತು. ಶ್ರೀ ರಾಘವೇಂದ್ರ ಸಪ್ತಾಹ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಕಲ್ಯಾಣೋತ್ಸವದೊಂದಿಗೆ ಮುಕ್ತಾಯಗೊಂಡವು.
ಬೆಳಿಗ್ಗೆ ಸುಪ್ರಭಾತದೊಂದಿಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡಲಾಯಿತು. ಸುಮಾರು 150 ಲೀಟರ್ ಹಾಲನ್ನು ಇದಕ್ಕಾಗಿ ಬಳಸಲಾಯಿತು. ಪ್ರಹ್ಲಾದರಾಜರಿಗೆ ಕನಕಾಭಿಷೇಕ, ರಥೋತ್ಸವ ಹಾಗೂ ಅಲಂಕಾರ ಸೇವೆ ನಡೆಯಿತು. ವೇದ– ಮಂತ್ರ ಮೊಳಗಿದವು.
ಶ್ರೀವಾರಿ ಫೌಂಡೇಷನ್ನ ವೆಂಕಟೇಶಮೂರ್ತಿ ಅವರ ನೇತೃತ್ವದಲ್ಲಿ ಕಲ್ಯಾಣೋತ್ಸವ ನಡೆಯಿತು. ಇದು 500ನೇ ಕಲ್ಯಾಣೋತ್ಸವ ಎಂಬುದು ವಿಶೇಷತೆಯಾಗಿದೆ. ವಿಚಾರಣಾಕರ್ತರು ರಘೋತ್ತಮರಾವ್, ವ್ಯವಸ್ಥಾಪಕ ಶಾನಮಾಚಾರ್ಯರಾಯಸ್ತ, ಅರ್ಚಕರಾದ ಗುರಾಚಾರ್ಯ ಸಾಮಗ, ಧರ್ಮಾಧಿಕಾರಿ ಶ್ರೀರಂಗ ಹನಮ, ಸಾಗರ, ರಘುವೀರ ಆಚಾರ್ಯ, ಬಿಂಧು ಮಾಧವ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ದಾನಿಗಳನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.