ಕಲಘಟಗಿ: ಎಸ್.ಎಲ್. ಭೈರಪ್ಪ ಅವರು ಸಾಹಿತ್ಯ ಮಾತ್ರವಲ್ಲದೆ ತತ್ವಶಾಸ್ತ್ರ, ಸಂಸ್ಕೃತಿ ಮತ್ತು ಬೌದ್ಧಿಕ ವಿಚಾರಣಾ ಕ್ಷೇತ್ರಗಳಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಹಿರಿಯ ಸಾಹಿತಿಗಳಾದ ಕೆ.ಬಿ.ಪಾಟೀಲ ಕುಲಕರ್ಣಿ ಹೇಳಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ತಾಲ್ಲೂಕ ಕನ್ನಡ ಸಾಹಿತ್ಯ ಪರಿಷತ್ತನಿಂದ ಶನಿವಾರ ಆಯೋಜಿಸಿದ್ದ ಎಸ್.ಎಲ್.ಭೈರಪ್ಪ ಅವರಿಗೆ ನುಡಿ ನಮನ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಮ್ಮ ಕೃತಿಗಳ ಮೂಲಕ ಕನ್ನಡ ಸಾಹಿತ್ಯವನ್ನು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಅವರ ಜೀವನ ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದರು.
ಜನಪದ ವಿದ್ವಾಂಸ ಎಂ.ಆರ್ ತೋಟಗಂಟಿ ಮಾತನಾಡಿ, ಭೈರಪ್ಪ ಸಾಹಿತ್ಯ ಸೇವೆಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರಿಗೆ ಜ್ಞಾನಪೀಠ ಪ್ರಶಸ್ತಿ ಕೂಡ ಬರಬೇಕಾಗಿತ್ತು. ಅವರ ಪ್ರಮುಖ ಕಾದಂಬರಿಗಳಾದ ವಂಶವೃಕ್ಷ, ದಾಟು, ತಂತು ಮುಂತಾದವು ಕನ್ನಡ ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿವೆ. ಭೈರಪ್ಪನವರು ಕಾದಂಬರಿಗಳ ಜೊತೆಗೆ ಸೌಂದರ್ಯ ಮೀಮಾಂಸೆಯ ಕುರಿತು ಹಲವು ಗ್ರಂಥಗಳನ್ನು ರಚಿಸಿದ್ದಾರೆ ಎಂದರು.
ಸಾಹಿತಿ ವೈ.ಜಿ.ಭಗವತಿ ಮಾತನಾಡಿ, ಹುಟ್ಟು ಕಡು ಬಡತನದಲ್ಲಿ ಬೆಳೆದು ಸಾಧನೆ ಮಾಡಿದ ಮೇರು ಪರ್ವತ ಭೈರಪ್ಪ. ಅವರ ಕಾದಂಬರಿಗಳಲ್ಲಿ ಮಾನವೀಯತೆ, ಸಂವೇದನಾಶೀಲತೆ ಮತ್ತು ಸಮಾಜಮುಖಿ ಚಿಂತನೆಗಳು ತುಂಬಿಕೊಂಡಿದ್ದು, ಹಲವಾರು ಕೃತಿಗಳು ನಾಟಕ, ಸಿನಿಮಾ, ಧಾರಾವಾಹಿಗಳ ರೂಪದಲ್ಲಿಯೂ ಜನಮನ ಗೆದ್ದಿವೆ. ಗೃಹಭಂಗ ಕಾದಂಬರಿ ಗಿರೀಶ್ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಜನಪ್ರಿಯತೆಯನ್ನು ಗಳಿಸಿತ್ತು ಎಂದರು.
ಹಿರಿಯ ಸಾಹಿತಿ ಅಶೋಕ ಅರ್ಕಸಾಲಿ, ತಾಲ್ಲೂಕು ಕಸಾಪ ಅಧ್ಯಕ್ಷ ರಮೇಶ ಸೋಲಾರಗೋಪ್ಪ, ಗೌರವ ಕಾರ್ಯದರ್ಶಿ ಗಿರೀಶ್ ಮುಕ್ಕಲ, ಪ್ರಭುಲಿಂಗ ರಂಗಾಪುರ, ವಕೀಲರ ಸಂಘದ ಅಧ್ಯಕ್ಷ ಅಣ್ಣಪ್ಪ ಓಲೆಕಾರ, ಬಸವರಾಜ ದೊಡ್ಡಮನಿ, ಪಿಡಿಓ ಪುಂಡಲಿಕ ಯಲ್ಲಾರಿ, ಎಚ್.ಎನ್.ಸುನಗದ, ಗಂಗಯ್ಯ ಹಿರೇಮಠ, ರಮೇಶ್ ಬೆರೂಡಗಿ, ಸೋಮಲಿಂಗ ಒಡೆಯರ, ಬಸವರಾಜ ತಿಪ್ಪಣ್ಣವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.