ಹುಬ್ಬಳ್ಳಿ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯ ನಿರ್ವಾಹಕ ಎಂಜಿನಿಯರ್ ದೇವರಾಜ ಶಿಗ್ಗಾವಿ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಮನೆ, ಕೋಟಿ ಲಿಂಗೇಶ್ವರ ನಗರ ಮತ್ತು ವಿದ್ಯಾನಗರದ ಮನೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಮೂರು ವಾಹನಗಳಲ್ಲಿ ಬಂದ ಅಧಿಕಾರಿಗಳು ತಪಾಸಣೆಯಲ್ಲಿ ಪಾಲ್ಗೊಂಡಿದ್ದಾರೆ.
ದೇವರಾಜ ಶಿಗ್ಗಾಂವಿ ಧಾರವಾಡದ ನೀರಾವರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಇದನ್ನೂ ಓದಿ.. ರಾಜ್ಯದಲ್ಲಿ ಏಳು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ
ದೇವರಾಜ ಶಿಗ್ಗಾಂವಿ ಈ ಮೊದಲು ಧಾರವಾಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಈಗ ಅವರಿಗೆ ವರ್ಗಾವಣೆಯಾಗಿದ್ದು ಸ್ಥಳ ತೋರಿಸಿಲ್ಲ.
ದೇವರಾಜ ಅವರ ಪತ್ನಿಯ ಸಹೋದರ ಕೃಷ್ಣ ಭೀಮಪ್ಪ ಗಾಡಿ ವಡ್ಡರ ಅವರ ಮಾಲೀಕತ್ವದ ರಾಜೀವ ನಗರದ ಮೂರು ಅಂತಸ್ತಿನ ಮನೆ, ಪತ್ನಿಯ ತಂದೆ ಭೀಮಪ್ಪ ರಾಮಪ್ಪ ಗಾಡಿ ವಡ್ಡರ ಅವರ ಮನೆಯಿರುವ ನಗರದ ಸುಳ್ಳ ರಸ್ತೆಯ ಬಾಲಾಜಿ ನಗರದ ಶ್ರೀರಾಮ ನಿವಾಸ ಮತ್ತು ದೇವರಾಜ ಅವರ ತಾಯಿ ವಾಸವಿರುವ ಕೋಟಿ ಲಿಂಗೇಶ್ವರ ನಗರದ ಎರಡು ಅಂತಸ್ತಿನ ಕುಸುಮಾವತಿ ಕಲ್ಮೇಶ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆದಿದೆ ಎಂದು ಎಸಿಬಿ ಅಧಿಕಾರಿಯೊಬ್ಬರು ಪ್ರಜಾವಾಣಿ ಗೆ ಖಚಿತಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.