
ಸಾವು (ಪ್ರಾತಿನಿಧಿಕ ಚಿತ್ರ)
ಧಾರವಾಡ: ನಗರದ ಸಾಯಿದರ್ಶನ ಬಡಾವಣೆಯ ಮನೆಯೊಂದರಲ್ಲಿ ವಾಸವಿದ್ದ ನೇಪಾಳ ಮೂಲದ ಏಳು ಮಂದಿಯಲ್ಲಿ ಒಬ್ಬರು ಮೃತಪಟ್ಟು, ಆರು ಮಂದಿ ಶನಿವಾರ ಅಸ್ವಸ್ಥರಾಗಿದ್ದಾರೆ.
ವಿವೇಕ (40) ಮೃತಪಟ್ಟವರು. ಅಸ್ವಸ್ಥಗೊಂಡಿದ್ದ ನರೇಶ್, ನಿತೀಶ್, ಡಿಕೇಶ್, ಲಕ್ಷ್ಮಣ, ಸೂಧನ್ ಮತ್ತು ಕಮಾರ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ.
ಏಳು ಮಂದಿ ‘ಚಿಂಗ್ಸ್ ಚಾಂಗ್’ ಮೊಮೊಸ್ ಅಂಗಡಿ ನಡೆಸುತ್ತಿದ್ದರು. ಮನೆಯಲ್ಲಿ ಅವರು ಅಡುಗೆ ಒಲೆಗೆ ಇದ್ದಿಲು ಬಳಸಿರುವುದು ಕಂಡುಬಂದಿದೆ. ಶನಿವಾರ ಬೆಳಿಗ್ಗೆ ನೆರೆಹೊರೆಯವರು ಆ ಮನೆಯಲ್ಲಿದ್ದವರು ಅಸ್ವಸ್ಥರಾಗಿರುವುದನ್ನು ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪರಿಶೀಲನೆ ನಡೆಸಿದಾಗ ಒಬ್ಬರು ಮೃತಪಟ್ಟಿದ್ದರು.
‘ಹೊಗೆ ಆವರಿಸಿ ಉಸಿರುಗಟ್ಟಿರಬಹುದು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ತನಿಖೆ ನಡೆಸಲಾಗುವುದು’ ಎಂದು ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದರು. ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.