ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
ಹುಬ್ಬಳ್ಳಿ: ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಹುಬ್ಬಳ್ಳಿ ನಗರದಲ್ಲಿ ಶೇ 95ರಷ್ಟು ಪೂರ್ಣಗೊಂಡಿದೆ. ಶೇ 5ರಷ್ಟು ಮನೆಗಳು ಪತ್ತೆಯಾಗದ ಕಾರಣ, ನ್ಯಾಯಬೆಲೆ ಅಂಗಡಿಗಳ ಮೊರೆ ಹೋಗಲು ಯೋಜಿಸಲಾಗಿದೆ.
ಹುಬ್ಬಳ್ಳಿ ನಗರದಲ್ಲಿ 2.11 ಲಕ್ಷ ಮನೆಗಳ ಸಮೀಕ್ಷೆ ನಡೆಸುವ ಗುರಿಯೊಂದಿಗೆ, ಕಾರ್ಯಯೋಜನೆ ಸಿದ್ಧಪಡಿಸಲಾಗಿತ್ತು. ಈವರೆಗೆ 2.01 ಲಕ್ಷ ಮನೆಗಳನ್ನು ಸಮೀಕ್ಷೆ ಮಾಡಿದ್ದು, ಅವುಗಳಲ್ಲಿ ಬಾಡಿಗೆ ಮನೆ, ಮನೆಗೆ ಬಾಗಿಲು ಹಾಕಿದ್ದು, ಉದ್ಯಾನದ ಶೆಡ್ ಸೇರಿದಂತೆ ಕೆಲವು ಕಾರಣಗಳಿಂದ 46 ಸಾವಿರ ಮನೆಗಳನ್ನು ಕೈಬಿಡಲಾಗಿದೆ.
ಸಮೀಕ್ಷೆಗೆ ಸಿಗದ 10 ಸಾವಿರ ಮನೆಗಳ ದತ್ತಾಂಶ ಸಂಗ್ರಹ ಶಿಕ್ಷಕರಿಗೆ ಸವಾಲಾಗಿ ಪರಿಣಮಿಸಿದೆ. ಯುಎಚ್ಐಡಿ ಆಧರಿಸಿ, ಗೂಗಲ್ ಮ್ಯಾಪ್ ಸಹಾಯದಿಂದ ತೆರಳಿದರೂ ಮನೆಗಳು ಪತ್ತೆಯಾಗುತ್ತಿಲ್ಲ. ಕೆಲವು ಕಡೆ ಒಂದೇ ಮನೆಯಿದ್ದು, ಮೂರು–ನಾಲ್ಕು ಕುಟುಂಬಗಳು ವಾಸವಾಗಿವೆ. ಅಲ್ಲಿ ಒಂದೇ ಕುಟುಂಬ ಮಾತ್ರ ಮಾಹಿತಿ ನೀಡಿದ್ದು, ಉಳಿದವರು ನೀಡಿಲ್ಲ ಎನ್ನುವ ಮಾಹಿತಿಯಿದೆ. ಹೀಗಾಗಿ ಅವರ ಪತ್ತೆ ಕಾರ್ಯ ಕಷ್ಟವಾಗಿದೆ. ಇದಕ್ಕಾಗಿ, ನ್ಯಾಯಬೆಲೆ ಅಂಗಡಿ ಮೂಲಕ ಅವರನ್ನು ಪತ್ತೆ ಹಚ್ಚಲು ಮುಂದಾಗಿದ್ದೇವೆ’ ಎಂದು ಪಾಲಿಕೆ ಆಯುಕ್ತರೂ ಆಗಿರುವ ಸಮೀಕ್ಷೆಯ ನೋಡಲ್ ಅಧಿಕಾರಿ ರುದ್ರೇಶ ಘಾಳಿ ತಿಳಿಸಿದರು.
‘ಸಮೀಕ್ಷೆಯಲ್ಲಿ ಭಾಗಿಯಾದ ಕುಟುಂಬಗಳ ರೇಷನ್ ಕಾರ್ಡ್ ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಭಾನುವಾರ ನ್ಯಾಯಬೆಲೆ ಅಂಗಡಿ ಮಾಲೀಕರ ಸಭೆ ಕರೆದು, ಅವುಗಳನ್ನು ಹಂಚಿಕೆ ಮಾಡಿಕೊಳ್ಳುತ್ತೇವೆ. ಆಗ, ಬಿಟ್ಟು ಹೋದ ರೇಷನ್ ಕಾರ್ಡ್ಗಳ ಮಾಹಿತಿ ಒಂದೆಡೆ ಸಂಗ್ರಹಿಸಿ, ಮನೆಗಳ ವಿಳಾಸ ಪತ್ತೆ ಹಚ್ಚಲಾಗುವುದು’ ಎಂದು ಹೇಳಿದರು.
‘ಅ. 18ರವರೆಗೂ ಸಮೀಕ್ಷೆ ನಡೆಯಲಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶಿಕ್ಷಕರ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು, ಪಾಲಿಕೆ ಸಿಬ್ಬಂದಿಯನ್ನು ನಿಯೋಜಿಸಿಕೊಳ್ಳಲಾಗಿದೆ’ ಎಂದರು.
ಪ್ರತಿ ಮನೆ ಸಮೀಕ್ಷೆಗೆ ಸೂಚನೆ
ನವಲಗುಂದ: ‘ಹಲವು ಕಡೆ ಮನೆ ಮಾಲೀಕರು ಸಮೀಕ್ಷೆದಾರರಿಗೆ ಸಹಕರಿಸುತ್ತಿಲ್ಲ. ಕೆಲವರು ಯಾಕೆ ಸಮೀಕ್ಷೆಗೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಮಾನಸಿಕವಾಗಿ ನೋವು ಅನುಭವಿಸುವಂತಾಗಿದೆ’ ಎಂದು ಸಭೆಯಲ್ಲಿ ಸಮೀಕ್ಷೆದಾರರು ಅಳಲು ತೋಡಿಕೊಂಡ ಪ್ರಸಂಗ ಶನಿವಾರ ಜರುಗಿತು.
ಪಟ್ಟಣದ ಶಿಕ್ಷಕರ ಕಲ್ಯಾಣ ಕೇಂದ್ರದಲ್ಲಿ ಆಯೋಜಿಸಿದ್ದ ತಾಲ್ಲೂಕಿನ ಸಮೀಕ್ಷೆದಾರರ ಸಭೆಯಲ್ಲಿ ಭಾಗವಹಿಸಿದ್ದ ಸಮೀಕ್ಷೆದಾರರು ನೋಡಲ್ ಅಧಿಕಾರಿ ಹಾಗೂ ತಹಶೀಲ್ದಾರ್ ಸಭೆಯಲ್ಲಿ ತಿಳಿಸಿದರು.
ತಹಶೀಲ್ದಾರ್ ಸುಧೀರ್ ಸಾಹುಕಾರ್, ‘ಸಮೀಕ್ಷೆದಾರರು ಪ್ರತಿ ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಬೇಕು ನಿಮಗೆ ಯಾವ ಗ್ರಾಮದಲ್ಲಿ ತೊಂದರೆ ಇದೆಯೋ ಆ ಗ್ರಾಮದ ನ್ಯಾಯ ಬೆಲೆ ಅಂಗಡಿಯವರ ಸಹಾಯ ಪಡೆದು ಸಮೀಕ್ಷೆ ಕಾರ್ಯ ಮಾಡಿ. ಒಂದು ಬಾರಿ ಸಮೀಕ್ಷೆಯಾದರೆ ಮತ್ತೆ ಅದರಲ್ಲಿ ತಿದ್ದುಪಡಿಯಾಗುವ ಅವಕಾಶ ಇದೆ. ಹಾಗಾಗಿ ಎಲ್ಲ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಬೇಕು’ ಎಂದರು.
ಸಮೀಕ್ಷೆ ಕಾರ್ಯದ ನೋಡಲ್ ಅಧಿಕಾರಿ ದೇವರಾಜ್ ಮಾತನಾಡಿ, ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಇನ್ನೂ ಸಮೀಕ್ಷೆಗೆ ಒಳಪಡದೇ ಇರುವ ನಾಗರಿಕರನ್ನು ಕಡ್ಡಾಯವಾಗಿ ಸಮೀಕ್ಷೆ ಮಾಡಬೇಕು. ಯಾರು ಕೂಡ ಸಮಯ ಕಳೆಯದಂತೆ ಎಲ್ಲ ನಾಗರಿಕರು ಸಮೀಕ್ಷೆಯಲ್ಲಿ ಒಳಗೊಳ್ಳುವಂತೆ ಖಚಿತಪಡಿಸಿ
ಕೊಳ್ಳಬೇಕು’ ಎಂದು ತಿಳಿಸಿದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಣಾಚಾರಿ, ಬಿ.ಎಸ್.ಪಾಟೀಲ, ಶ್ರೀನಿವಾಸ ಅಮಾತೆಣ್ಣವರ, ಎಸ್.ಎಂ. ಬೆಂಚಿಕೇರಿ, ಗಣೇಶ ಹೊಳೆಯಣ್ಣವರ, ಎಂ.ಎನ್.ವಗ್ಗರ, ಎಲ್.ಬಿ.ಕಮತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.