ಹುಬ್ಬಳ್ಳಿ: ಅಸಹಜವಾದ ಮಹಾ ಅಪಧಮನಿ (ಎಂಡೋವಾಸ್ಕುಲರ್) ಊತದಿಂದ ಬಳಲುತ್ತಿದ್ದ 78 ವರ್ಷದ ವ್ಯಕ್ತಿಯನ್ನು ರಕ್ತನಾಳ ತಜ್ಞ ಚೇತನ ಹೊಸಕಟ್ಟಿ ಶಸ್ತ್ರಚಿಕಿತ್ಸೆಯ ಮೂಲಕ ಗುಣಪಡಿಸಿದ್ದಾರೆ.
‘ರೋಗಿಗೆ ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದಲ್ಲಿ ಊತ ಮತ್ತಷ್ಟು ಹೆಚ್ಚಾಗಿ ಜೀವ ಕಳೆದುಕೊಳ್ಳುವ ಅಪಾಯವಿತ್ತು. ಸ್ಥಳೀಯ ಅರಿವಳಿಕೆಯಡಿ ಎರಡು ಕಾಳಿನಷ್ಟು ರಂಧ್ರ ಮಾಡಿ, ಸ್ಟೆಂಟ್ ಕಸಿ ಹಿಗ್ಗಿಸಿ ಚಿಕಿತ್ಸೆ ನೀಡಲಾಯಿತು. ಯಶಸ್ವಿ ಚಿಕಿತ್ಸೆಯ ಮಾರನೆಯ ದಿನವೇ ರೋಗಿ ನಡೆದಾಡತೊಡಗಿದರು. ಎರಡು ದಿನಗಳ ನಂತರ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು’ ಎಂದು ಚೇತನ ತಿಳಿಸಿದ್ದಾರೆ.
‘ರೋಗಿ ಮೊದಲು ಹೈಪರ್ ಟೆನ್ಶನ್, ಧೂಮಪಾನ ಚಟ, ಮಧುಮೇಹ, ಸಿ.ಒ.ಪಿ.ಡಿ. ಹಾಗೂ ರಕ್ತಹೀನತೆಯಿಂದ ಬಳಲುತ್ತಿದ್ದರು. ಹಾಗಾಗಿ ಅವರಿಗೆ ತೆರೆದ ಬೈಪಾಸ್ ಊತದ ಚಿಕಿತ್ಸೆ ಕ್ಲಿಷ್ಟಕರವಾಗಿತ್ತು. ಊತದ ಗಾತ್ರ ಸಾಮಾನ್ಯವಾಗಿ 4ರಿಂದ 5 ಸೆಂ.ಮೀ.ಗಿಂತ ಚಿಕ್ಕದಾಗಿರುತ್ತದೆ. ಆದರೆ, ಈ ರೋಗಿಯಲ್ಲಿ ಊತದ ಗಾತ್ರ 10 ಸೆಂ.ಮೀ. ಇತ್ತು. ಇದರಿಂದ ಮಹಾಅಪಧಮನಿ ಊತವು ಛಿದ್ರವಾಗಿ ರೋಗಿಯ ಜೀವಕ್ಕೆ ಅಪಾಯವಾಗುವ ಸಂಭವವಿತ್ತು’ ಎಂದಿದ್ದಾರೆ.
ಡಾ. ಕೃಷ್ಣ ಚೈತನ್ಯ, ಡಾ.ಎನ್.ಎಸ್. ಹಿರೇಗೌಡರ, ಡಾ.ಶೈಲೇಂದ್ರ, ಡಾ.ಮಹೇಶ ಎನ್. ಡಾ.ಚೇತನ ಎಂ. ಮತ್ತು ಡಾ. ತೇಜಸ್ ಅವರ ತಂಡ ಸುಚಿರಾಯು ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.