ADVERTISEMENT

ಅವ್ಯವಹಾರ; ತನಿಖೆಗೆ ಸಮಿತಿ ರಚನೆ, ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 7:26 IST
Last Updated 14 ಫೆಬ್ರುವರಿ 2026, 7:26 IST
ಹುಬ್ಬಳ್ಳಿಯ ಕೋರ್ಟ್‌ ವೃತ್ತದ ಸಾಯಿ ಮಂದಿರದಲ್ಲಿ ಶುಕ್ರವಾರ ಸಂಭ್ರಮಾಚರಿಸಿದ ಶ್ರೀರಾಮ ಸೇನಾ ಕಾರ್ಯಕರ್ತರಿಗೆ, ಮಂದಿರದ ಅಧ್ಯಕ್ಷ ಮಹಾದೇವ ಮಾಶ್ಯಾಳ ಆರತಿ ನೀಡಿದರು. ಪ್ರಮೋದ ಮುತಾಲಿಕ್‌ ಉಪಸ್ಥಿತರಿದ್ದರು
ಹುಬ್ಬಳ್ಳಿಯ ಕೋರ್ಟ್‌ ವೃತ್ತದ ಸಾಯಿ ಮಂದಿರದಲ್ಲಿ ಶುಕ್ರವಾರ ಸಂಭ್ರಮಾಚರಿಸಿದ ಶ್ರೀರಾಮ ಸೇನಾ ಕಾರ್ಯಕರ್ತರಿಗೆ, ಮಂದಿರದ ಅಧ್ಯಕ್ಷ ಮಹಾದೇವ ಮಾಶ್ಯಾಳ ಆರತಿ ನೀಡಿದರು. ಪ್ರಮೋದ ಮುತಾಲಿಕ್‌ ಉಪಸ್ಥಿತರಿದ್ದರು   

ಹುಬ್ಬಳ್ಳಿ: ಇಲ್ಲಿಯ ಕೋರ್ಟ್‌ ರಸ್ತೆಯ ಶಿರಡಿ ಸಾಯಿ ಮಂದಿರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪದ ತನಿಖೆಗೆ ಜಿಲ್ಲಾ ನೋಂದಣಾಧಿಕಾರಿ ಅವರು ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದನ್ನು ಸ್ವಾಗತಿಸಿ ಶ್ರೀರಾಮ ಸೇನಾ ಸಂಘಟನೆ ಶುಕ್ರವಾರ ಸಂಭ್ರಮೋತ್ಸವ ಆಚರಿಸಿತು.

ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ನೇತೃತ್ವದಲ್ಲಿ ಸಂಭ್ರಮಿಸಿದ ಕಾರ್ಯಕರ್ತರು, ಪರಸ್ಪರ ಸಿಹಿ ತಿನ್ನಿಸಿ ಪಟಾಕಿ ಸಿಡಿಸಿದರು. ಅನ್ಯಾಯದ ವಿರುದ್ಧದ ಹೋರಾಟಕ್ಕೆ ಮೊದಲ ಹಂತದಲ್ಲಿ ಜಯ ದೊರಕಿದೆ ಎಂದರು.

‘ಸಾಯಿ ಮಂದಿರ ಆಡಳಿತ ವ್ಯವಸ್ಥೆ ಬಗ್ಗೆ ಶ್ರೀರಾಮಸೇನೆ, ಸಾಯಿ ಭಕ್ತರು, ಸಾಯಿ ಮಂದಿರ ಸಂರಕ್ಷಣಾ ಮಂಡಳಿ ನಾಲ್ಕು ತಿಂಗಳಿನಿಂದ ಹೋರಾಟ ನಡೆಸುತ್ತ ಬಂದಿದೆ. ಪ್ರತಿಫಲವಾಗಿ ಅವ್ಯವಹಾರದ ತನಿಖೆಗೆ ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ನೇಮಕ ಮಾಡಿ, ತನಿಖೆ ನಡೆಸಿ 60 ದಿನದಲ್ಲಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ’ ಎಂದು ಪ್ರಮೋದ ಮುತಾಲಿಕ್‌ ಹೇಳಿದರು.

ADVERTISEMENT

‘ಮಂದಿರದಲ್ಲಿ ನಡೆಯುತ್ತಿರುವ ಅಕ್ರಮದ ಬಗ್ಗೆ ನಾವು ಉಲ್ಲೇಖಿಸಿದ ಅಂಶಗಳನ್ನು ಸಮಿತಿ ಎದುರು ಮರೆಮಾಚುವ ಕೆಲಸ ಜಿಲ್ಲಾ ನೋಂದಾಣಾಧಿಕಾರಿ ಮಾಡಿದ್ದಾರೆ. ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು. ಮಂದಿರದ ಅಧ್ಯಕ್ಷರು ಸೇರಿ ಆಡಳಿತ ಮಂಡಳಿಯ ಸದಸ್ಯರಿಗೆ ನೈತಿಕತೆಯಿದ್ದರೆ, ತನಿಖೆ ಮುಗಿಯುವವರೆಗೂ ತಮ್ಮ ಅಧಿಕಾರದಿಂದ ದೂರ ಇರಬೇಕು. ಪೂಜೆ-ಪುನಸ್ಕಾರ, ಪ್ರಸಾದ ವಿತರಣೆ ಹೊರತುಪಡಿಸಿ ಹಣಕಾಸಿನ ವಹಿವಾಟು ನಡೆಸಬಾರದು’ ಎಂದು ಒತ್ತಾಯಿಸಿದರು.

ಮುಖಂಡರಾದ ಮೋಹನಕುಮಾರ, ಅಣ್ಣಪ್ಪ ದಿವಟಗಿ, ಮಹಾಂತೇಶ ಕಂಬಳಿ, ಗುಣವರ ದಡೋತಿ, ಬಸವರಾಜ ಗೌಡರ ಸೇರಿದಂತೆ ಅನೇಕರು ಇದ್ದರು.

ಸಾಯಿ ಮಂದಿರದ ಸದ್ಭಕ್ತ ಮಂಡಳಿ ಮೇಲಿನ ಆರೋಪದ ವಿಚಾರಣೆಗೆ ಆದೇಶಿಸಿರುವುದು ಸ್ವಾಗತಾರ್ಹ. ಯಾವುದೇ ಅವ್ಯವಹಾರ ನಡೆದಿಲ್ಲ. ತನಿಖೆಯಿಂದ ಸಾಬೀತಾಗಲಿದೆ
–ಮಹಾದೇವ ಮಾಶ್ಯಾಳ, ಅಧ್ಯಕ್ಷ ಸಾಯಿ ಸದ್ಭಕ್ತ ಮಂಡಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.