ADVERTISEMENT

ಎಸ್‌.ಟಿಗೆ ಸೇರ್ಪಡೆ: ಎಸ್‌ಎಸ್‌ಕೆ ಸಮಾಜ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2021, 11:36 IST
Last Updated 19 ಫೆಬ್ರುವರಿ 2021, 11:36 IST

ಹುಬ್ಬಳ್ಳಿ: ‘ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ(ಎಸ್‌.ಎಸ್‌.ಕೆ) ಸಮಾಜವು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದು, ಈ ಸಮಾಜಕ್ಕೆ ಪ‍ರಿಶಿಷ್ಟ ಪಂಗಡದ ಸ್ಥಾನ ನೀಡಬೇಕು’ ಎಂದು ಹುಬ್ಬಳ್ಳಿ–ಧಾರವಾಡದ ಎಸ್‌ಎಸ್‌ಕೆ ಸಮಾಜದ ಕೇಂದ್ರ ಪಂಚ ಸಮಿತಿಯ ಧರ್ಮದರ್ಶಿ ನೀಲಕಂಠ ಪಿ.ಜಡಿ ಆಗ್ರಹಿಸಿದರು.

‘ಎಸ್‌ಎಸ್‌ಕೆ ಸಮಾಜವನ್ನು ‘2ಎ‘ ಪ್ರವರ್ಗದಲ್ಲಿ ಸೇರಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಎಸ್‌.ಟಿ ಪ್ರವರ್ಗದ ಮೀಸಲಾತಿ ನೀಡಲಾಗಿದೆ. ರಾಜ್ಯದಲ್ಲಿಯೂ ಎಸ್‌.ಟಿ ಪಂಗಡಕ್ಕೆ ಸೇರ್ಪಡೆ ಮಾಡಿ ಮೀಸಲಾತಿ ನೀಡಬೇಕು‘ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಸಮಾಜದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ನಿಗಮ ಅಥವಾ ಮಂಡಳಿ ಸ್ಥಾಪಿಸಿ, ₹500 ಕೋಟಿ ಅನುದಾನ ನೀಡಬೇಕು. ಹುಬ್ಬಳ್ಳಿ–ಧಾರವಾಡದಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ಜಮೀನು ನೀಡಬೇಕು. ವಿದ್ಯಾರ್ಥಿಗಳಿಗಾಗಿ ವಸತಿ ನಿಲಯ ಸ್ಥಾಪಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಅಭಿನಂದನಾ ಸಮಾರಂಭ: ನಮ್ಮ ಸಮಾಜದವರಾದ ನಾಗೇಶ ಕಲಬುರ್ಗಿ ಅವರು ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆ.21ರಂದು ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ದೇಶಕ ರಾಜು ವಿ.ಜರತಾರಘರ, ಭೂನ್ಯಾಯ ಮಂಡಳಿ ಸದಸ್ಯೆ ಸಂಗೀತಾ ಬದ್ದಿ, ಆಶ್ರಯ ಸಮಿತಿ ಸದಸ್ಯೆ ರಂಜನಾ ಬಂಕಾಪುರ ಅವರನ್ನೂ ಸತ್ಕರಿಸಲು ನಿರ್ಧರಿಸಲಾಗಿದೆ‘ ಎಂದು ಹೇಳಿದರು.

‘ಕೇಶ್ವಾಪುರದ ಶ್ರೀನಿವಾಸ್‌ ಗಾರ್ಡ್‌ನಲ್ಲಿ 21ರಂದು ಸಂಜೆ 6ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಹುದ್ದೆಗಳಲ್ಲಿರುವ ಸಮಾಜದ 65 ಮಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುವುದು‘ ಎಂದು ತಿಳಿಸಿದರು.

ಜ್ಯೋತಿಯಾತ್ರೆ: ‘ಸಮಾಜದ ಮೂಲಪುರಷ ಸಹಸ್ರಾರ್ಜುನ ಮಹಾರಾಜರ ದಿವ್ಯ ಜ್ಯೋತಿ ಮಧ್ಯಪ್ರದೇಶದಿಂದ ನಗರಕ್ಕೆ ಬಂದು ಫೆ.20ಕ್ಕೆ ಒಂದು ವರ್ಷ ಪೂರ್ಣವಾಗಲಿದೆ. ಅಂದು ಜ್ಯೊತಿಯ ಮೆರವಣಿಗೆ, ವಿಶೇಷ ಪೂಜೆ ಹಾಗೂ ಹೋಮಹವನಗಳು ನಡೆಯಲಿವೆ’ ಎಂದು ನೀಲಕಂಠ ಜಡಿ ಅವರು ಮಾಹಿತಿ ನೀಡಿದರು.

ಪಂಚ ಸಮಿತಿಯ ಗೌರವ ಕಾರ್ಯದರ್ಶಿ ನಾರಾಯಣ ಎನ್‌.ಖೋಡೆ, ಉಪ ಮುಖ್ಯ ಧರ್ಮದರ್ಶಿ ಹನುಮಂತಸಾ ಜಿ.ನಿರಂಜನ, ಸಹ ಗೌರವ ಕಾರ್ಯದರ್ಶಿ, ಉಪ ಮುಖ್ಯಕಾರ್ಯದರ್ಶಿ ಕೆ.ಟಿ.ಪವಾರ, ಕೋಶಾಧಿಕಾರಿ ಕೆ.ಪಿ. ಪೂಜಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.