ಹುಬ್ಬಳ್ಳಿ: ಕೊರೊನಾ ಭೀತಿ ನಡುವೆಯೇ ಸೋಮವಾರ ವಿದ್ಯಾರ್ಥಿಗಳು ನಗರದ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು.
ಪರೀಕ್ಷೆಗೆ ಬರುವ ವೇಳೆ ಹಾಗೂ ಮುಕ್ತಾಯದ ನಂತರ ವಿದ್ಯಾರ್ಥಿಗಳು ಗುಂಪು ಗುಂಪಾಗಿಯೇ ಸಂಚರಿಸಿದರು. ಕೋವಿಡ್ ನಿಯಮ ಕೇವಲ ಪರೀಕ್ಷಾ ಕೇಂದ್ರ ಒಳಗೆ ಮಾತ್ರ ಎನ್ನುವಂತಿತ್ತು.
ಪ್ರಲ್ಹಾದ ಜೊಶಿ ಸಂಯೋಜಿತ ಕ್ಷಮತಾ ಸಂಸ್ಥೆ, ಗೋ ಗ್ರೀನ್ ಪೆಡ್ಲರ್ಸ್ ತಂಡದಿಂದ ಪರೀಕ್ಷೆ ಬರೆಯಲು ಬಂದವರಿಗೆ ಸ್ಯಾನಿಟೈಸ್, ಮಾಸ್ಕ್ ವಿತರಿಸಲಾಯಿತು. ಇಸ್ಕಾನ್ನಿಂದ ನೀರಿನ ಬಾಟಲ್ ಹಾಗೂ ಬಿಸ್ಕತ್ತು ನೀಡಲಾಯಿತು.
ದಾಜೀಬಾನಪೇಟೆಯ ದುರ್ಗಾದೇವಿ ಪ್ರೌಢಶಾಲೆ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಿದ್ದ ಕುಸಗಲ್ ಪ್ರೌಢಶಾಲೆ ವಿದ್ಯಾರ್ಥಿನಿ ಕೀರ್ತಿ, ಲ್ಯಾಮಿಂಗ್ಟನ್ ಶಾಲೆಗೆ ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಳು. ಗೊಂದಲಕ್ಕೊಳಗಾದ ವಿದ್ಯಾರ್ಥಿನಿಯನ್ನು ಗಮನಿಸಿದ ಉಪನಗರ ಠಾಣೆ ಕಾನ್ಸ್ಟೆಬಲ್ ಶಿವು ಲಿಂಗದಾಳ ಅವರು ದುರ್ಗಾದೇವಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬೈಕ್ನಲ್ಲಿ ಬಿಟ್ಟು ಬಂದರು.
‘ಪರೀಕ್ಷೆಗೆ ಕಳುಹಿಸಬೇಕೋ, ಬೇಡವೋ ಎಂದು ಪಾಲಕರು ಭಯಗೊಂಡಿದ್ದರು. ಆದರೆ, ಪರೀಕ್ಷಾ ಕೇಂದ್ರದಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮ ನಮಗೆ ಆತ್ಮವಿಶ್ವಾಸ ಮೂಡಿಸಿದೆ. ಬಹು ಆಯ್ಕೆ ಪ್ರಶ್ನೆಗಳ ಮಾದರಿಯಲ್ಲಿ ಮೂರು ವಿಷಯಗಳಿಗೆ ಉತ್ತರ ಗುರುತು ಹಾಕಬೇಕಿದ್ದರಿಂದ ಹೊಸ ಅನುಭವ ನೀಡಿದೆ’ ಎಂದು ನವಲಗುಂದದ ಕಿತ್ತೂರುರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಅಕ್ಷತಾ ಗೌರಿ ಹೇಳಿದರು.
‘ಕೋವಿಡ್ ಆತಂಕದ ನಡುವೆಯೂ ಮೊದಲ ದಿನದ ಪರೀಕ್ಷೆ ನಿರಾತಂಕವಾಗಿ ಮುಗಿದಿದೆ. ನಗರದಲ್ಲಿ 11 ಮಂದಿ ಗೈರಾಗಿದ್ದರು. ದೂರವಾಣಿ ಮೂಲಕ ಅವರ ಪಾಲಕರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ’ ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.