ಹುಬ್ಬಳ್ಳಿ: ‘ಭಗವದ್ಗೀತಾ ಅಭಿಯಾನದ ಅಂಗವಾಗಿ ಡಿಸೆಂಬರ್ ತಿಂಗಳಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯಮಟ್ಟದ ಭಗವದ್ಗೀತಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದು ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
‘ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಪರ್ಧೆ ನಡೆಯಲಿದ್ದು, ಭಗವದ್ಗೀತೆಯ 3ನೇ ಅಧ್ಯಾಯ ಕರ್ಮಯೋಗವನ್ನು ಸ್ಪರ್ಧೆಗೆ ನಿಗದಿ ಪಡಿಸಲಾಗಿದೆ. ಈ ಅಧ್ಯಾಯದ ಎಲ್ಲ ಶ್ಲೋಕಗಳನ್ನು ಕಂಠಪಾಠ ಮಾಡಿ, ನಿರ್ಣಾಯಕರು ಸೂಚಿಸುವ ಯಾವುದೇ ಶ್ಲೋಕವನ್ನು ಅನುಕ್ರಮವಾಗಿ ಐದು ನಿಮಿಷದಲ್ಲಿ ಹೇಳಬೇಕು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಹಾಗೂ ಗಾಂಧೀಜಿ ವಿಷಯದ ಕುರಿತು, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಗವದ್ಗೀತೆ ಮತ್ತು ತಿಲಕರು ವಿಷಯದ ಕುರಿತು ಐದು ನಿಮಿಷದ ಭಾಷಣ ಸ್ಪರ್ಧೆ ನಡೆಯಲಿದೆ’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತಾಲ್ಲೂಕು ಮಟ್ಟದ ಸ್ಪರ್ಧೆ ಡಿ. 4, ಜಿಲ್ಲಾ ಮಟ್ಟದ ಸ್ಪರ್ಧೆ ಡಿ. 11ರಂದು ಭೌತಿಕವಾಗಿ ನಡೆಯಲಿದೆ. ರಾಜ್ಯ ಮಟ್ಟದ ಸ್ಪರ್ಧೆ ಡಿ. 19ರಂದು ಆನ್ಲೈನ್ನಲ್ಲಿ ಏಕಕಾಲದಲ್ಲಿಯೇ ನಡೆಯಲಿದೆ ಎಂದರು.
‘ಅಭಿಯಾನದ ಪ್ರಯುಕ್ತ ರಾಜ್ಯದಾದ್ಯಂತ ಗೀತಾ ಪಠಣ ಕೇಂದ್ರ ಹೆಚ್ಚಿಸಲು ಭಕ್ತರಿಗೆ ತಿಳಿಸಲಾಗಿದೆ. ಸ್ಪರ್ಧೆ ಕುರಿತು ಹೆಚ್ಚಿನ ಮಾಹಿತಿಗೆ ನಾರಾಯಣ ಭಟ್ಟ ಸುಳಗಾರ (geethaspardhe@gamil.com/ 94495 68081) ಮತ್ತು ಗಂಗಾಧರ ಗೋಡೆ(04424611049) ಸಂಪರ್ಕಿಸಬಹುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.