ADVERTISEMENT

ಟ್ಯಾಂಕರ್‌ ನೀರು ಪೂರೈಕೆಗೆ ಕ್ರಮ: ಅಬ್ಬಯ್ಯ

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 16:01 IST
Last Updated 29 ಜನವರಿ 2023, 16:01 IST
ಹುಬ್ಬಳ್ಳಿಯ 72ನೇ ವಾರ್ಡಿನಲ್ಲಿ ಭಾನುವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ಅವರು, ಸ್ಥಳೀಯರ ಅಹವಾಲು ಆಲಿಸಿದರು
ಹುಬ್ಬಳ್ಳಿಯ 72ನೇ ವಾರ್ಡಿನಲ್ಲಿ ಭಾನುವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ಅವರು, ಸ್ಥಳೀಯರ ಅಹವಾಲು ಆಲಿಸಿದರು   

ಹುಬ್ಬಳ್ಳಿ: ‘ನೀರು ಪೂರೈಕೆ ನಿರ್ವಹಣೆಯನ್ನು ಎಲ್‌ ಆ್ಯಂಡ್‌ ಟಿ ಕಂಪನಿಯವರು ವಹಿಸಿಕೊಂಡಾಗಿನಿಂದ ನೀರಿಗೆ ಹಾಹಾಕಾರ ಶುರುವಾಗಿದೆ. ಈ ಕುರಿತು ಈಗಾಗಲೇ ಹಲವು ಬಾರಿ ಸಭೆ ನಡೆಸಿದೆ ಪರಿಣಾಮ ನೀರು ಪೊರೈಕೆ ವ್ಯವಸ್ಥೆ ಸ್ವಲ್ಪಮಟ್ಟಿಗೆ ಸುಧಾರಿಸಿದೆ. ನಿತ್ಯ ಟ್ಯಾಂಕರ್ ನೀರು ಪೂರೈಕೆಗೆ ಸೂಚಿಸಲಾಗಿದ್ದು, ನೀರಿನ ಕೊರತೆ ಕಂಡು ಬಂದಲ್ಲಿ ಹೆಚ್ಚಿನ ಟ್ಯಾಂಕರ್ ನೀರಿಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಶಾಸಕ ಪ್ರಸಾದ ಅಬ್ಬಯ್ಯ ಭರವಸೆ ನೀಡಿದರು.

ನಗರದ 72ನೇ ವಾರ್ಡಿನ ಶಿವಶಕ್ತಿ ನಗರ, ಶಿಂಧೆ ಪ್ಲಾಟ್, ಬೇಪಾರಿ ಪ್ಲಾಟ್‌ನಲ್ಲಿ ಭಾನುವಾರ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

‘ಬೇಪಾರಿ ಪ್ಲಾಟ್‌ನ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಒಳಚರಂಡಿ ಸಮಸ್ಯೆ ನಿವಾರಣೆಗೆ ವೆಟ್‌ವೆಲ್ ಕಾಮಗಾರಿ ಪ್ರಗತಿಯಲ್ಲಿದೆ. 26 ಅಂಗನವಾಡಿ ಕೇಂದ್ರಗಳನ್ನು ಮಂಜೂರು ಮಾಡಿಸಲಾಗಿದೆ. ಶೀಘ್ರದಲ್ಲೇ ಅಂಗನವಾಡಿ ತೆರೆಯಲು ಕ್ರಮ ವಹಿಸಲಾಗುವುದು. ನಿತ್ಯ ಕಸ ವಿಲೇವಾರಿ ವಾಹನ ಪ್ರತಿ ರಸ್ತೆಗೆ ಬರುವ ಸಂಬಂಧ ಪಾಲಿಕೆ ಆಯುಕ್ತರೊಂದಿಗೆ ಮಾತನಾಡುತ್ತೇನೆ. ಏನೇ ಸಮಸ್ಯೆ ಇದ್ದರೂ ನನ್ನ ಕಚೇರಿ ಸಂಪರ್ಕಿಸಿ’ ಎಂದು ಅಹವಾಲು ಸಲ್ಲಿಸಿದ ಸಾರ್ವಜನಿಕರಿಗೆ ಹೇಳಿದರು.

ADVERTISEMENT

ಮುತವಲ್ಲಿಗಳಾದ ಮುಸ್ತಾಕ್ ಅಹ್ಮದ್‌ ಮನಿಯಾರ್, ಮೊಹಮ್ಮದ್‌ ರಫೀಕ್ ಧಾರವಾಡ, ಗೌಸ್ ಅಹ್ಮದ್‌ ಬಳಿಗಾರ್, ಚರ್ಚ್‌ ಮುಖ್ಯಸ್ಥ ರಮೇಶ, ಮುಖಂಡರಾದ ಗೌಸ್ ಅಹ್ಮದ್‌ ಬಳಿಗಾರ, ತೌಹಿದ್‌ ಭಾಷಾ ನವಲೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.