ಹುಬ್ಬಳ್ಳಿ: ಆಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಜ. 15ರಿಂದ ದೇಶದಾದ್ಯಂತ ದೇಣಿಗೆ ಸಂಗ್ರಹ ಅಭಿಯಾನ ಆರಂಭವಾಗಲಿದ್ದು, ಕರ್ನಾಟಕದಲ್ಲಿ 90 ಲಕ್ಷ ರಾಮ ಭಕ್ತರ ಮನೆಗಳನ್ನು ತಲುಪುವ ಗುರಿ ಹೊಂದಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಕ್ಷೇತ್ರಿಯ ಸಂಘಟನಾ ಕಾರ್ಯದರ್ಶಿ ಕೇಶವ ಹೆಗಡೆ ಹೇಳಿದರು.
ಆರ್ಎಸ್ಎಸ್ ಕಚೇರಿ ’ಕೇಶವಕುಂಜ‘ದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಅಭಿಯಾನದಲ್ಲಿ ಐದು ಕಾರ್ಯಕರ್ತರನ್ನು ಒಳಗೊಂಡ ತಂಡ ಗ್ರಾಮೀಣ ಪ್ರದೇಶದಿಂದ ಕೆಲಸ ಮಾಡಲಿದೆ. ಆಯಾ ದಿನ ಸಂಗ್ರಹವಾದ ದೇಣಿಗೆಯನ್ನು 48 ತಾಸಿನ ಒಳಗೆ ತೀರ್ಥಕ್ಷೇತ್ರ ಟ್ರಸ್ಟ್ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು. ಇದಕ್ಕೆ ಆದಾಯ ತೆರಿಗೆ ಕಾಯ್ದೆಯಲ್ಲಿ ತೆರಿಗೆ ವಿನಾಯಿತಿ ಸೌಲಭ್ಯ ಸಿಗಲಿದೆ’ ಎಂದರು.
’ದೇಶದಾದ್ಯಂತ 15ರಿಂದ ಫೆ. 27ರ ತನಕ ಅಭಿಯಾನ ನಡೆಯಲಿದೆ. ರಾಜ್ಯದಲ್ಲಿ 20 ದಿನಗಳಲ್ಲಿ 27,500 ಗ್ರಾಮಗಳನ್ನು ಮುಟ್ಟುವ ಗುರಿ ಹೊಂದಿದ್ದೇವೆ. ದೇಶದಲ್ಲಿ ಒಟ್ಟು 22 ಕೋಟಿ ರಾಮಭಕ್ತರ ಮನೆಗಳಿದ್ದು, ಅದರಲ್ಲಿ ಕನಿಷ್ಠ 11 ಕೋಟಿ ಮನೆಗಳನ್ನಾದರೂ ತಲುಪಲಾಗುವುದು. ಈ ಕುರಿತು ಜನಜಾಗೃತಿ ಮೂಡಿಸಲು ಉತ್ತರ ಪ್ರಾಂತದಲ್ಲಿ 50 ಲಕ್ಷ ಕರಪತ್ರಗಳನ್ನು ಹಂಚಲಾಗುವುದು’ ಎಂದರು.
ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಮಹಾಅಭಿಯಾನದ ರಾಜ್ಯ ಸಮಿತಿ ಸದಸ್ಯರಾದ ರಾಮನಗೌಡ್ರು, ಡಿ.ಟಿ. ಮಳಗಿ ಮತ್ತು ಕೃಷ್ಣ ಜೋಶಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.