ಧಾರವಾಡ: ‘ನಾವಿನ್ಯತೆ, ಸಾಮಾಜಿಕ ಜವಾಬ್ದಾರಿ, ಕೌಶಲ್ಯ ಆಧಾರಿತ, ಅನ್ವೇಷಣಾ ವಿವೇಚನೆಯನ್ನು ಬೆಳೆಸುವ ಹಾಗೂ ಬೋಧಿಸುವ ಅವಶ್ಯಕತೆಪ್ರಸ್ತುತ ಉನ್ನತ ಶಿಕ್ಷಣ ಸಂಸ್ಥೆಗಳಿಗಿವೆ’ ಎಂದು ಮುಂಬೈನ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಪ್ರಾಧ್ಯಾಪಕ ಡಾ. ಬಿ.ಎನ್.ಜಗತಾಪ ಅಭಿಪ್ರಯಾಪಟ್ಟರು.
ಕರ್ನಾಟಕ ವಿಶ್ವವಿದ್ಯಾಲಯದ ಶಿಕ್ಷಣ ತಜ್ಞರ ದಿನಾಚರಣೆಯ ಅಂಗವಾಗಿ ಆಯೋಜಿಸಿದ ಡಾ. ಡಿ.ಸಿ.ಪಾವಟೆ ಮೂಲತತ್ವ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಉನ್ನತ ಶಿಕ್ಷಣ: ಸವಾಲುಗಳು, ಅಪೇಕ್ಷೆಗಳು ಮತ್ತು ಅಭಿಪ್ರಾಯಗಳ ಕೇಂದ್ರೀಕರಣ’ ಎಂಬ ವಿಷಯ ಕುರಿತು ಮಾತನಾಡಿದರು.
‘ದೇಶದ ಬೆಳವಣಿಗೆಯಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸಿದೆ. ಸಾಮಾಜಿಕ ಆರ್ಥಿಕ ಮತ್ತು ಸಾಂಸ್ಕೃತಿಕವಾಗಿ ಅಭಿವೃದ್ಧಿಯಾಗಬೇಕಾದರೆ ಶಿಕ್ಷಣ ಬುನಾದಿಯಾಗಬೇಕು. ಅಮೆರಿಕಾ, ಚೀನಾಗೆ ಹೋಲಿಸಿದರೆ ದೇಶದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಸಂಖ್ಯೆ ಕಡಿಮೆ ಇದೆ. ಆದ್ದರಿಂದ ಇಂದು ಉನ್ನತ ಶಿಕ್ಷಣವನ್ನು ಭಾರತದಲ್ಲಿ ಪುನರ್ ರೂಪಿಸಬೇಕಾದ ಪರಿಸ್ಥಿತಿ ಇದೆ’ ಎಂದರು.
‘ಪ್ರತಿ ವರ್ಷ ಸುಮಾರು ಒಂದು ಕೋಟಿ ಯುವಕರು ಉದ್ಯೋಗದ ಮಾರುಕಟ್ಟೆ ಪ್ರವೇಶಿಸುತ್ತಿದ್ದಾರೆ. ಹೀಗಾಗಿ ದೇಶದಲ್ಲಿ ಸದ್ಯದ ನಿರುದ್ಯೋಗದ ಪ್ರಮಾಣ ಶೇ 12.09ರಷ್ಟಿದೆ. ಇಂಥ ಸಂದರ್ಭದಲ್ಲಿ ಕೃತಕ ಬುದ್ಧಮತ್ತೆ, ಮಷಿನ್ ಲರ್ನಿಂಗ್, ಇಂಟರ್ನೆಟ್, ಡಾಟಾ ವಿಶ್ಲೇಷಣೆ, ಎಲೆಕ್ಟ್ರಿಕಲ್ ಮೊಬಿಲಿಟಿಯಂತ ವಿಷಯಗಳ ಆಧಾರತ ವೃತ್ತಿಪರ ಕೋರ್ಸ್ಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಹೆಚ್ಚು ಅಳವಡಿಸಬೇಕಾಗಿದೆ’ ಎಂದರು.
‘ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಯೋಜನಾ ತಯಾರಿಕೆಗೆ ನೆರವಾಗುವಂತ ಸಂಶೋಧನೆಗಳು ನಡೆಯಬೇಕು. ಪ್ರಸ್ತುತ ಅತ್ಯಂತ ಜಟಿಲ ಸಮಸ್ಯಗಳಾದ ಕುಡಿಯುವ ನೀರು, ಕೃಷಿ, ವಾಣಿಜ್ಯ, ಆರೋಗ್ಯ, ತ್ಯಾಜ್ಯ ನಿರ್ವಹಣೆಯಂತ ಮತ್ತು ರೈತರ ಆತ್ಮಹತ್ಯೆಯಂತ ಸಮಸ್ಯೆಗಳ ಕುರಿತು ಸಂಶೋಧನೆ ಅಗತ್ಯ. ಪ್ರಸ್ತುತ ಉನ್ನತ ಶಿಕ್ಷಣವು ಪಾಶ್ಚಿಮಾತ್ಯ ಮತ್ತು ಆಧುನೀಕರಣ ಎಂಬ ಸಂಘರ್ಷದ ಮಧ್ಯ ಸಿಲುಕಿದ್ದು, ಅದರಿಂದ ಹೊರಬರಬೇಕು’ ಎಂದುಡಾ. ಬಿ.ಎನ್.ಜಗತಾಪ ಹೇಳಿದರು.
ಪ್ರಭಾರ ಕುಲಪತಿ ಪ್ರೊ. ಎ.ಎಸ್.ಶಿರಾಳಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕುಲಸಚಿವ ಪ್ರೊ. ಸಿ.ಬಿ.ಹೊನ್ನುಸಿದ್ಧಾರ್ಥ, ಡಾ. ಹರಿಲಾಲ್ ಪವಾರ, ಪ್ರೊ. ಸಂಜೀವ ಇನಾಂದಾರ, ಚಂದ್ರಕಾಂತ ಬೆಲ್ಲದ, ಡಾ. ಚಂದ್ರಶೇಖರ ರೊಟ್ಟಿಗವಾಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.