ADVERTISEMENT

ಜನರಿಗೆ ಸಂಚಾರ ದಟ್ಟಣೆಯ ಬಿಸಿ

ಜೋಶಿ ಪುತ್ರಿಯ ಮದುವೆಯ ಆರತಕ್ಷತೆಯಲ್ಲಿ ಕೇಂದ್ರ, ರಾಜ್ಯದ ನಾಯಕರು ಭಾಗಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 4:44 IST
Last Updated 3 ಸೆಪ್ಟೆಂಬರ್ 2021, 4:44 IST

ಹುಬ್ಬಳ್ಳಿ: ನಗರದ ಡೆನಿಸನ್ಸ್‌ ಹೋಟೆಲ್‌ನಲ್ಲಿ ಗುರುವಾರ ನಡೆದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಪುತ್ರಿ ಅರ್ಪಿತಾ ಅವರ ವಿವಾಹದ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕೇಂದ್ರ ಹಾಗೂ ರಾಜ್ಯದ ನಾಯಕರು ಬಂದಿದ್ದರು. ಹೀಗಾಗಿ ಕೆಲವು ಗಂಟೆಗಳ ಕಾಲ ಜನರಿಗೆ ಸಂಚಾರ ದಟ್ಟಣೆಯ ಬಿಸಿ ತಟ್ಟಿತು.

ಬೆಳಿಗ್ಗೆಯಿಂದಲೇ ರಾಜ್ಯ ಹಾಗೂ ಕೇಂದ್ರದ ನಾಯಕರು ಹುಬ್ಬಳ್ಳಿಗೆ ಬರುತ್ತಿದ್ದರು. ಅದರಲ್ಲಿ ಕೆಲವರು ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದರೆ, ಇನ್ನೂ ಕೆಲವರು ಇಲ್ಲಿಂದ ಬೇರೆ ಕಡೆ ಹೋಗಿ ಮತ್ತೆ ಇಲ್ಲಿಗೆ ಮರಳಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಗುರುವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ಬಂದು, ಹೆಲಿಕಾಪ್ಟರ್‌ ಮೂಲಕ ದಾವಣಗೆರೆಗೆ ತೆರಳಿದರು. ಅಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಜೆ ಹುಬ್ಬಳ್ಳಿಗೆ ಮರಳಿದರು.

ADVERTISEMENT

ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ರೈಲ್ವೆ ಸಚಿವ ಪಿಯೂಷ್‌ ಗೊಯಲ್, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ರೈಲ್ವೆ ಖಾತೆ ರಾಜ್ಯ ಸಚಿವ ರಾವ್‌ಸಾಹೇಬ್‌ ಪಾಟೀಲ್‌ ದಾನ್ವೆ ಸೇರಿದಂತೆ ಹಲವು ಕೇಂದ್ರದ ಮುಖಂಡರು ಮಧ್ಯಾಹ್ನವೇ ಇಲ್ಲಿಗೆ ಬಂದರು. ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್,ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅರ್ಜುನ್‌ ರಾಮ್ ಮೇಘವಾಲ್,ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್‌, ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್ ಇದ್ದರು.

ಸಂಜೆ 6.30ರ ಸುಮಾರಿಗೆ ಗೋಕುಲ ರಸ್ತೆಯ ಅನಂತ ಗ್ರ್ಯಾಂಡ್‌ ಹೋಟೆಲ್‌ನಿಂದ ಹೊರಟ ಕೇಂದ್ರದ ನಾಯಕರು ಅರ್ಧಗಂಟೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ದಂಪತಿಗೆ ಹಾರೈಸಿದರು. ಈ ವೇಳೆ ಹೆಚ್ಚು ಸಂಚಾರ ದಟ್ಟಣೆ ಉಂಟಾಯಿತು.

ಈ ನಾಯಕರು ಹೋಟೆಲ್‌ನಿಂದ ಹೊರಬರುವ ಕೆಲ ಹೊತ್ತಿನ ಮೊದಲೇ ಎಲ್ಲ ಕಡೆ ವಾಹನಗಳ ಸಂಚಾರ ತಡೆ ಹಿಡಿದು ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ದಾವಣಗೆರೆ ಕಾರ್ಯಕ್ರಮ ಮುಗಿಸಿಕೊಂಡು ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

ಗಣ್ಯರು ತೆರಳುವ ಮಾರ್ಗದ ರಸ್ತೆಗಳಲ್ಲಿ ಜನಸಾಮಾನ್ಯರ ಸಂಚಾರ ಬಂದ್ ಮಾಡಿದ್ದರಿಂದ ಗೋಕುಲ ರಸ್ತೆಯ ವಿವಿಧ ಬಡಾವಣೆಗಳಿಂದ ಮುಖ್ಯರಸ್ತೆಗೆ ಬರುವ ಮಾರ್ಗದಲ್ಲಿ ಜನ ಸಾಕಷ್ಟು ಹೊತ್ತು ಕಾಯಬೇಕಾಯಿತು. ಡೆನಿಸನ್ಸ್‌ ಹೋಟೆಲ್‌ಗೆ ಹೋಗಲು ಹೊಸ ಬಸ್‌ ನಿಲ್ದಾಣದ ಪಕ್ಕದ ರಸ್ತೆ ಬಂದ್ ಮಾಡಲಾಗಿತ್ತು.

ರಾಜ್ಯ ಸಚಿವರಾದ ಸಿ.ಸಿ.ಪಾಟೀಲ, ಶಂಕರಪಾಟೀಲ ಮುನೇನಕೊಪ್ಪ, ಶಿವರಾಮ ಹೆಬ್ಬಾರ, ಹಾಲಪ್ಪ ಆಚಾರ್, ಶಾಸಕರಾದ ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ ಪಾಲ್ಗೊಂಡಿದ್ದರು.

ಆರತಕ್ಷತೆಗೆ ಸ್ವಾಮೀಜಿಗಳು, ಮಠಾಧೀಶರು, ರಾಜಕಾರಣಿಗಳ ದಂಡು

ದಿನಪೂರ್ತಿ ಚಟುವಟಿಕೆಯ ತಾಣವಾದ ಗೋಕುಲ ರಸ್ತೆ

ಡೆನಿಸನ್ಸ್‌ ಹೋಟೆಲ್‌, ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಚಾರ ದಟ್ಟಣೆ

ಕಾಣದ ಅಂತರ

ಕೋವಿಡ್‌ ಹೊಸ ಮಾರ್ಗಸೂಚಿಯ ಪ್ರಕಾರ ಮದುವೆ ಕಾರ್ಯಕ್ರಮಕ್ಕೆ 400 ಜನರಿಗೆ ಪಾಲ್ಗೊಳ್ಳಲು ಮಾತ್ರ ಅವಕಾಶ ನೀಡಲಾಗಿದೆ. ಆದರೆ, ಆರತಕ್ಷತೆಯಲ್ಲಿ ನಿಯಮವನ್ನೂ ಮೀರಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದರು. ಅದರಲ್ಲಿ ಬಹಳಷ್ಟು ಜನ ಅಂತರ ಕಾಯ್ದುಕೊಂಡಿರಲಿಲ್ಲ.

ಅಮಿತ್‌ ಶಾಗೆ ಪುಸ್ತಕ ಉಡುಗೊರೆ

ಹುಬ್ಬಳ್ಳಿ: ನವದೆಹಲಿಯಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬರಮಾಡಿಕೊಂಡರು.

ಶಾ ಅವರಿಗೆ ಶಾಲುಹೊದಿಸಿ ಲೇಖಕ ದೀಪಕ್ ಚೋಪ್ರಾ ಬರೆದ ‘ಬುದ್ಧ- ಎ ಸ್ಟೋರಿ ಆಫ್ ಎನಲೈಟ್‌ಮೆಂಟ್’ ಪುಸ್ತಕ ಉಡುಗೊರೆಯಾಗಿ ನೀಡಿ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.