ADVERTISEMENT

ಹುಬ್ಬಳ್ಳಿ: ಇಬ್ಬರು ಬಂಧಿತರಇಂದ 20 ಕೆ.ಜಿ ಗಾಂಜಾ ವಶಕ್ಕೆ

ಗದಗ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2022, 6:53 IST
Last Updated 9 ನವೆಂಬರ್ 2022, 6:53 IST

ಹುಬ್ಬಳ್ಳಿ: ಆಂಧ್ರಪ್ರದೇಶ ಮೂಲದ ಇಬ್ಬರನ್ನು ಮಂಗಳವಾರ ಬಂಧಿಸಿರುವ ನಗರದ ಸಿಇಎನ್ ಅಪರಾಧ ಠಾಣೆ ಪೊಲೀಸರು, ಸುಮಾರು ₹4 ಲಕ್ಷ ಮೌಲ್ಯದ 20 ಕೆ.ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಕಾಲೇಜು ಬ್ಯಾಗ್‌ನಲ್ಲಿ ಗಾಂಜಾ ತಂದಿದ್ದ ಆರೋಪಿಗಳು, ಗದಗ ರಸ್ತೆಯಲ್ಲಿರುವ ರೈಲ್ವೆ ಆಸ್ಪತ್ರೆ ಬಳಿ ಮಾರಾಟ ಮಾಡುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ, ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

₹18‌ ಲಕ್ಷ ವಂಚನೆ: ಹೂಡಿಕೆ ಹೆಸರಿನಲ್ಲಿ ವಿದ್ಯಾನಗರದ ಯುವರಾಜ್ ಎಂಬುವರಿಗೆ ವಂಚಕರು ₹18.48 ಲಕ್ಷ ವಂಚಿಸಿದ್ದಾರೆ. ಗೂಗಲ್ ಸರ್ಚ್ ಮಾಡುತ್ತಿದ್ದ ಯುವರಾಜ್ ಅವರು, ಆಮೇಜಾನ್ ಹೋಮ್ ಬೇಸ್ಡ್ ವರ್ಕ್ ಎಂಬ ಮಾಹಿತಿ ಮೇಲೆ ಕ್ಲಿಕ್ ಮಾಡಿದ್ದಾರೆ. ನಂತರ ಅಲ್ಲಿ ಸಿಕ್ಕ ವಾಟ್ಸ್‌ಆ್ಯಪ್‌ ಸಂಖ್ಯೆಯೊಂದಿಗೆ ಸಂಪರ್ಕ ಸಾಧಿಸಿದ್ದಾರೆ.

ಈ ವೇಳೆ ವಂಚಕರು ಆಮೇಜಾನ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ನಂಬಿಸಿದ್ದಾರೆ. ಆರಂಭದಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಹಣ ಕೊಟ್ಟಿರುವ ವಂಚಕರು, ನಂತರ ಹೆಚ್ಚಿನ ಹಣವನ್ನು ಹಂತಹಂತವಾಗಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಚಾಕು ಇರಿತ: ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ನೇಕಾರನಗರದ ನವೀನ್ ಎಂಬಾತ ಗೌಳಿ ಗಲ್ಲಿಯ ಕಾರ್ತಿಕ ಎಂಬುವರಿಗೆ ಚಾಕುವಿನಿಂದ ಇರಿದಿರುವ ಘಟನೆ ಅಂಚಟಗೇರಿ ಓಣಿಯಲ್ಲಿ ನಡೆದಿದೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಧನ: ನಗರದ ಅಂಚಟಗೇರಿ ಓಣಿಯ ಬಾರ್ ಬಳಿ ಚಾಕು ಇಟ್ಟುಕೊಂಡು ಓಡಾಡುತ್ತಿದ್ದ ಇಬ್ಬರನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ದೇಸಾಯಿ ಓಣಿಯ ಬಾಷಾ ಮತ್ತು ಮೊಹಮ್ಮದ್ ಬಂಧಿತರು. ಮತ್ತೊಬ್ಬ ಇಂದಿರಾನಗರದ ತರುಣ ಪರಾರಿಯಾಗಿದ್ದಾನೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.