ADVERTISEMENT

ಬಸವಣ್ಣನ ಮಾಹಿತಿಯಲ್ಲಿ ಲೋಪ: ಸರಿಪಡಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 4:57 IST
Last Updated 3 ಜೂನ್ 2022, 4:57 IST

ಹುಬ್ಬಳ್ಳಿ: ‘ಒಂಬತ್ತನೇ ತರಗತಿಯ ‘ಸಮಾಜ ವಿಜ್ಞಾನ’ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಬಸವಣ್ಣನವರ ಇತಿಹಾಸವನ್ನು ತಿರುಚಲಾಗಿದೆ. ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ಹೊಸದಾಗಿ ರಚಿಸಿ, ಲೋಪಗಳನ್ನು ಸರಿಪಡಿಸಬೇಕು’ ಎಂದು ಗುರುಬಸವ ಮಂಟಪ ಟ್ರಸ್ಟ್‌ ಕಮಿಟಿಯ ಸಂಚಾಲಕ ಶಶಿಧರ ಕರವೀರಶೆಟ್ಟರ್‌ ಆಗ್ರಹಿಸಿದರು.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರದ ಆಸೆಗಾಗಿ ಸಮಾಜದವರೇ ಆದ ಮುಖ್ಯಮಂತ್ರಿ ಬೊಮ್ಮಾಯಿ ಸೇರಿದಂತೆ ಅನೇಕ ಜನಪ್ರತಿನಿಧಿಗಳು ಈ ಬಗ್ಗೆ ಮಾತನಾಡುತ್ತಿಲ್ಲ. ಇದನ್ನು ಲಿಂಗಾಯತರು ಎಂದೂ ಕ್ಷಮಿಸುವುದಿಲ್ಲ. ಸರ್ಕಾರ ಶೀಘ್ರ ಕ್ರಮ ವಹಿಸದಿದ್ದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ’ ಎಂದು ಎಚ್ಚರಿಸಿದರು.

‘ಬಸವಣ್ಣನವರು ಉಪನಯನವಾದ ನಂತರ ಕೂಡಲಸಂಗಮಕ್ಕೆ ನಡೆದರು, ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗ ದೀಕ್ಷೆ ಪಡೆದರು, ವೀರಶೈವ ಧರ್ಮ ಅಭಿವೃದ್ಧಿಪಡಿಸಿದರು, ಶಕ್ತಿ ವಿಶಿಷ್ಠಾದ್ವೈತ ಸಿದ್ಧಾಂತ ಬೋಧಿಸಿದರು ಎಂಬ ತಪ್ಪು ಮಾಹಿತಿಗಳು ಪಠ್ಯದಲ್ಲಿವೆ. ಸ್ತ್ರೀಯರ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ಬಸವಣ್ಣನವರು ಉಪನಯನ ಧಿಕ್ಕರಿಸಿದರು. ಇಷ್ಟಲಿಂಗ ಸೃಷ್ಟಿಕರ್ತರಾದ ಅವರು ಯಾರಿಂದಲೂ ಲಿಂಗ ದೀಕ್ಷೆ ಪಡೆಯಲಿಲ್ಲ. ಲಿಂಗಾಯತ ಧರ್ಮ ಸ್ಥಾಪಿಸದರೇ ಹೊರತು, ವೀರಶೈವ ಧರ್ಮವನ್ನಲ್ಲ. ಮಾನವನ ಉದ್ಧಾರಕ್ಕಾಗಿ ಷಟಸ್ಥಲ ಸಿದ್ಧಾಂತ ಬೋಧಿಸಿದರು’ ಎಂದು ಹೇಳಿದರು.

ADVERTISEMENT

‘ವಿಶ್ವದ ಮೊಟ್ಟಮೊದಲ ಪ್ರಜಾತಾಂತ್ರಿಕ ಸಂಸತ್ತಿನ ಮಾದರಿಯಾದ ಅನುಭವ ಮಂಟಪವನ್ನು ಸ್ಥಾಪಿಸಿದರು ಎಂಬ ಉಲ್ಲೇಖವಿಲ್ಲ. ವಚನ ಸಾಹಿತ್ಯವು ಕರ್ನಾಟಕದ್ದೇ ಆದ ವಿಶಿಷ್ಟ ಸಾಹಿತ್ಯ ಪ್ರಕಾರ ಎಂಬುದನ್ನೂ ತಿಳಿಸಿಲ್ಲ’ ಎಂದು ಆರೋಪಿಸಿದರು.

ಕಮಿಟಿ ಅಧ್ಯಕ್ಷ ಚಂದ್ರಶೇಖರ ಕರವೀರಶೆಟ್ಟರ್, ಕಾರ್ಯಕರ್ತರಾದ ವಿ.ಎಸ್‌. ಲಿಗಾಡಿ, ಸುಧೀರ್ ಎಂ.ಸಾದರಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.