ಹುಬ್ಬಳ್ಳಿ: ‘ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾರತ ಕಂಡ ದೂರದೃಷ್ಟಿಯುಳ್ಳ ನಾಯಕ. ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಅವರು ಕ್ರಾಂತಿಯನ್ನೇ ಮಾಡಿದರು’ ಎಂದು ಶಾಸಕ ಜಗದೀಶ ಶೆಟ್ಟರ್ ಬಣ್ಣಿಸಿದರು.
ವಾಜಪೇಯಿ ಜನ್ಮದಿನದ ಅಂಗವಾಗಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಆವರಣದಲ್ಲಿ ಮಂಗಳವಾರ ಬಿಜೆಪಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಮಿಡ್ಟೌನ್ ಹಾಗೂ ರಾಷ್ಟ್ರೋತ್ಥಾನ ರಕ್ತನಿಧಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಇಂದು ನಾವು ದೇಶದಲ್ಲಿ ಕಾಣುತ್ತಿರುವ ನಾಲ್ಕು ಪಥ, ಆರು ಪಥ ಹಾಗೂ ಎಂಟು ಪಥದ ರಸ್ತೆಗಳು ವಾಜಪೇಯಿ ಕನಸಿನ ಕೂಸುಗಳಾಗಿವೆ’ ಎಂದರು.
‘ವಾಜಪೇಯಿ ಪ್ರಧಾನಿಯಾಗಿದ್ದಾಗ, ತಾವು ರೂಪಿಸಿದ ಯೋಜನೆಗಳನ್ನು ತಮ್ಮ ಅವಧಿಯಲ್ಲೇ ಕಾರ್ಯಗತವಾಗುವಂತೆ ನೋಡಿಕೊಂಡರು. ಆ ಮೂಲಕ, ವಿಳಂಬಕ್ಕೆ ಆಸ್ಪದ ಕೊಡದಂತೆ ಆಡಳಿತ ನಡೆಸಿದರು. ಮತ್ತೊಂದು ಅವಧಿಗೆ ಅವರೇನಾದರೂ ಪ್ರಧಾನಿಯಾಗಿದ್ದರೆ ಮಹತ್ವಕಾಂಕ್ಷಿ ಯೋಜನೆಯಾದ ನದಿಗಳ ಜೋಡಣೆ ಇಷ್ಟೊತ್ತಿಗಾಗಲೇ ಕಾರ್ಯಗತವಾಗಿರುತ್ತಿತ್ತು’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ರಕ್ತದಾನ ಮಾಡಿದರು.
ಮೂರು ಸಾವಿರ ಮಠದ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ, ಸಂಸದ ಪ್ರಹ್ಲಾದ ಜೋಶಿ, ಮೇಯರ್ ಸುಧೀರ ಸರಾಫ್, ಆರ್ಎಸ್ಎಸ್ ರಾಷ್ಟ್ರೀಯ ಸಂಘಟನಾ ಪ್ರಮುಖ್ ಮಂಗೇಶ್ ಬೆಂಡೆ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ ಕಲಬುರ್ಗಿ, ಬಿಜೆಪಿ ಮುಖಂಡರಾದ ಮಾ. ನಾಗರಾಜ, ಮಲ್ಲಿಕಾರ್ಜುನ ಸಾವಕಾರ, ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ಹನುಮಂತಪ್ಪ ದೊಡ್ಡಮನಿ ಹಾಗೂ ದತ್ತಮೂರ್ತಿ ಕುಲಕರ್ಣಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.