ADVERTISEMENT

ಹುಬ್ಬಳ್ಳಿ | ಕನ್ನಡಿಗರಿಗೆ ಕಿರುಕುಳ: ಕಾರ್ಮಿಕ ಕಾಯ್ದೆ ಉಲ್ಲಂಘನೆ; ಆರೋಪ

ವೇರ್ ಬಿಡಿಕೆ ವ್ಯಾಲ್ವ್ಸ್ ಕಾರ್ಮಿಕರ ಸಂಘ ಆರೋಪ: ನ.4ರಿಂದ ಧರಣಿ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2024, 14:29 IST
Last Updated 28 ಅಕ್ಟೋಬರ್ 2024, 14:29 IST

ಹುಬ್ಬಳ್ಳಿ: ಗೋಕುಲ ರಸ್ತೆಯಲ್ಲಿರುವ ವೇರ್ ಬಿಡಿಕೆ ವ್ಯಾಲ್ವ್ಸ್ ಕಾರ್ಖಾನೆ ಸ್ಥಳೀಯ ಕಾರ್ಮಿಕರ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದು, ಆಡಳಿತ ಮಂಡಳಿ ಧೋರಣೆ ಖಂಡಿಸಿ ನ.4ರಂದು ಅನಿರ್ದಿಷ್ಟಾವಧಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಖಾನೆಯ ಕಾರ್ಮಿಕರ ಸಂಘದ ಉಪಾಧ್ಯಕ್ಷ ವಿನೋದಕುಮಾರ ವೀರಾಪುರ ತಿಳಿಸಿದರು.

ಅವರು ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸರೋಜಿನಿ ಮಹಿಷಿ ವರದಿಯಂತೆ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂಬ ನಿಯಮವಿದೆ. ಅಲ್ಲದೇ ಅನೇಕ ಕಾರ್ಮಿಕ ಕಾನೂನುಗಳನ್ನು ಉಲ್ಲಂಘನೆ ಮಾಡುತ್ತಿದ್ದು, ಸರ್ಕಾರ ಕಾರ್ಖಾನೆ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಗುಜರಾತ ಮೂಲದ ಮೆಹತಾ ಎಂಬುವರು ಕಾರ್ಖಾನೆ ಮಾಲೀಕತ್ವ ಹೊಂದಿದ್ದು, ರಾತ್ರೋರಾತ್ರಿ 41 ಕಾರ್ಮಿಕರನ್ನು ಗುಜರಾತಿನಲ್ಲಿ ನೋಂದಣಿಯೇ ಇಲ್ಲದ ಕಾರ್ಖಾನೆಗೆ ವರ್ಗಾವಣೆ ಮಾಡಿದ್ದಾರೆ ಅಲ್ಲದೆ ಕಾರ್ಮಿಕ ಯೂನಿಯನ್‌ ಮುಖಂಡರು ಸೇರಿ 12 ಜನರನ್ನು ಅಮಾನತು ಮಾಡಿದ್ದಾರೆ. 100 ಜನ ತಮ್ಮವರನ್ನೇ ಗುಜರಾತಿನಿಂದ ಕರೆದುಕೊಂಡು ಬಂದು ಹೆಚ್ಚು ಸಮಯ ಕೆಲಸ ಮಾಡಿಸಿಕೊಂಡು, ಹೆಚ್ಚು ವೇತನ ನೀಡುತ್ತಿದ್ದಾರೆ. ಕಾರ್ಖಾನೆಗೆ ನೆಲ, ಜಲ ನೀಡದೇ ಸ್ಥಳೀಯರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಬೆಳಗಾವಿಯ ಕಾರ್ಮಿಕ ಇಲಾಖೆಯ ಉಪ ಆಯುಕ್ತರಿಗೆ ಈ ಕುರಿತು ದೂರು ನೀಡಲಾಗಿದೆ. ದಾಖಲೆಗಳನ್ನು ಸಲ್ಲಿಸುವಂತೆ ಮಾಲೀಕರಿಗೆ ಸೂಚನೆ ನೀಡಿದ್ದರೂ ಅಸಡ್ಡೆ ತೋರುತ್ತಿದ್ದಾರೆ. ನಮ್ಮ ಜಿಲ್ಲೆಯವರೇ ಆದ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ಈ ಕುರಿತು ಜಿಲ್ಲಾಧಿಕಾರಿ, ಮಾಲೀಕರು, ಕಾರ್ಮಿಕರೊಂದಿಗೆ ಸಭೆ ನಡೆಸಿ ಯಾವುದೇ ಅನ್ಯಾಯವಾದರೂ ಸಹಿಸುವುದಿಲ್ಲ ಎಂದು ಸೂಚನೆ ನೀಡಿದ್ದರೂ ನಿರ್ಲಕ್ಷ್ಯ ತೋರುತ್ತಿದ್ದಾರೆ. ಆದ್ದರಿಂದ ಕಾರ್ಖಾನೆ ಮಾಲೀಕರ ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಎಲ್ಲ ಕಾರ್ಮಿಕರು ಕುಟುಂಬ ಸಮೇತ ಕಂಪೆನಿ ಎದುರು ಧರಣಿ ನಡೆಸಲಿದ್ದೇವೆ ಎಂದು ಹೇಳಿದರು.

ನೋಂದಣಿಯೇ ಇಲ್ಲದ ಕಂಪೆನಿಯೊಂದಕ್ಕೆ ಹೊರಗುತ್ತಿಗೆ ನೀಡಲಾಗಿದೆ. ಅವರ ಪರವಾನಗಿ ರದ್ದು ಮಾಡಿದ್ದರೂ ಅವರ ಮೂಲಕ 250ಕ್ಕೂ ಹೆಚ್ಚು ಕಾರ್ಮಿಕರನ್ನು ನೇಮಕ ಮಾಡಿಕೊಂಡಿದ್ದಾರೆ. ಮಾಲೀಕರ ಕನ್ನಡ ಹಾಗೂ ಕನ್ನಡಿಗರ ವಿರೋಧಿ ನೀತಿ ಹೇಗೆ ಇದೆ ಎಂದರೆ ತಮ್ಮ ಕಾರ್ಖಾನೆಗೆ ಬೇಕಾಗುವ ಸಣ್ಣಪುಟ್ಟ ವಸ್ತುಗಳನ್ನು ಗುಜರಾತಿನಿಂದ ತರಿಸಿಕೊಳ್ಳುತ್ತಾರೆ. ಇದರಿಂದ 60ಕ್ಕೂ ಹೆಚ್ಚು ಸಣ್ಣ ಕಾರ್ಖಾನೆಗಳು ಬಾಗಿಲು ಮುಚ್ಚಿವೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ದ್ಯಾಮಣ್ಣ ಸವಣೂರು, ಅಶೋಕ ಬಾರಕಿ, ವಾಸುದೇವ ಕುಂಟೆ, ಕೆ.ಆರ್‌.ಜೂಜಾರ್, ಬಿ.ಎಚ್‌.ಉಣಕಲ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.