ಹುಬ್ಬಳ್ಳಿ: ‘ಬಂಗಾರಕ್ಕೂ, ಭಾರತೀಯ ಪರಂಪರೆಗೂ ಅವಿನಾಭಾವ ನಂಟಿದೆ. ಬಂಗಾರ, ಆಪತ್ಕಾಲದ ಬಂಧುವೂ ಹೌದು’ ಎಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕೌಶಲಾಭಿವೃದ್ಧಿ ಘಟಕದ ಅಧ್ಯಕ್ಷ ಉದಯ ರೇವಣಕರ ತಿಳಿಸಿದರು.
ನಗರದಲ್ಲಿರುವ ಸಂಸ್ಥೆಯ ಸಭಾಂಗಣದಲ್ಲಿ ಶುಕ್ರವಾರ ಮಹಿಳಾ ಉದ್ಯಮಿಗಳ ಘಟಕ ಆಯೋಜಿಸಿದ್ದ ಚಿನ್ನ ಖರೀದಿ, ಮಾರಾಟ ಕುರಿತ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಪುರಾತನ ಕಾಲದಿಂದಲೂ ಬಂಗಾರಕ್ಕೆ ಮಹತ್ವವಿದೆ. ಹಬ್ಬ, ಶುಭ ಸಮಾರಂಭಗಳಲ್ಲಿ ಚಿನ್ನ ಖರೀದಿಸುವುದು ಭಾರತೀಯ ಸಂಸ್ಕೃತಿಯ ಭಾಗವಾಗಿದೆ. 1930ರಲ್ಲಿ ಹತ್ತು ಗ್ರಾಂ. ಚಿನ್ನಕ್ಕೆ ₹18 ಇತ್ತು, ಈಗ ₹56,000 ಆಗಿದೆ. ಕಾಲಕಾಲಕ್ಕೆ ದರ ಹೆಚ್ಚಿದಂತೆ, ಚಿನ್ನ ಮಾರಾಟ ಮಾಡುವವರಿಗೆ ಅಧಿಕ ಹಣ ಸಿಗುತ್ತಿದೆ. ವ್ಯಕ್ತಿ ಹಾಗೂ ದೇಶದ ಆರ್ಥಿಕ ಸ್ಥಿತಿ ದುರ್ಬಲವಾದಾಗ, ಬಂಗಾರ ಕೈಹಿಡಿದಿದೆ. ನೋಟುಗಳಿಗೆ ಆಯಾ ದೇಶದಲ್ಲಿ ಮಾತ್ರ ಬೆಲೆಯಿದೆ. ಚಿನ್ನಕ್ಕೆ ಎಲ್ಲ ಕಡೆ ಮೌಲ್ಯವಿದೆ’ ಎಂದು ವಿವರಿಸಿದರು.
‘ಆದಾಯ ಆಧರಿಸಿ ಚಿನ್ನ ಖರೀದಿಸಬೇಕು. ಅದಕ್ಕಾಗಿ ಸಾಲ ಮಾಡಿ, ಹೊರೆ ಮಾಡಿಕೊಳ್ಳಬಾರದು. ಚಿನ್ನಾಭರಣಕ್ಕಿಂತ ಚಿನ್ನದ ಗಟ್ಟಿ ಖರೀದಿಸಿ, ಇಟ್ಟುಕೊಳ್ಳುವುದು ಸೂಕ್ತ. ಖರೀದಿ ಸಂದರ್ಭದಲ್ಲಿ ಅದರ ಗುಣಮಟ್ಟ, ದರ, ಬಣ್ಣ, ಗಾತ್ರದ ಜತೆಗೆ ವ್ಯಾಪಾರಿಗಳ ವಿಶ್ವಾಸಾರ್ಹತೆಯತ್ತ ಹೆಚ್ಚಿನ ಗಮನ ಹರಿಸಬೇಕು. ಇಟಿಎಫ್, ಮ್ಯುಚುಯಲ್ ಫಂಡ್, ಬಾಂಡ್ಗಳ ಮೂಲಕ ಬಂಗಾರದ ಮೇಲಿನ ಹೂಡಿಕೆಗೆ ಸರ್ಕಾರ ಸಹ ಸಾಕಷ್ಟು ಅವಕಾಶ ಮಾಡಿಕೊಟ್ಟಿದೆ’ ಎಂದರು.
ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಉಪಾಧ್ಯಕ್ಷ ಎಸ್.ಪಿ.ಸಂಶಿಮಠ, ಗೌರವ ಕಾರ್ಯದರ್ಶಿ ಪ್ರವೀಣ ಅಗಡಿ, ಜಂಟಿ ಕಾರ್ಯದರ್ಶಿ ಶಂಕರ ಕೋಳಿವಾಡ, ವಾಣಿಜ್ಯೋದ್ಯಮ ಸಂಸ್ಥೆಯ ಮಹಿಳಾ ವಿಭಾಗದ ಅಧ್ಯಕ್ಷೆ ಅಂಜನಾ ಬಸನಗೌಡರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.