ಹುಬ್ಬಳ್ಳಿ: ‘ಬೇಡ ಮದ್ಯಪಾನ, ಮಾಡು ಯೋಗ ಧ್ಯಾನ’ ಎಂಬ ಧ್ಯೇಯದೊಂದಿಗೆ ಒಂದು ತಿಂಗಳ ಯೋಗ ಶಿಬಿರವನ್ನು ಜನವರಿ 1ರಿಂದ 30ರವರೆಗೆ ಆನ್ ಲೈನ್ ನಲ್ಲಿ ಉಚಿತವಾಗಿ ಆಯೋಜಿಸಲಾಗಿದೆ ಎಂದು ಪತಂಜಲಿ ಯೋಗ ಪೀಠದ ಕರ್ನಾಟಕ ಪ್ರಭಾರಿ ಭವರಲಾಲ್ ಆರ್ಯ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪತಂಜಲಿ ಯೋಗ ಸಮಿತಿ ಹಾಗೂ ಭಾರತ ಸ್ವಾಭಿಮಾನ್ ಟ್ರಸ್ಟ್ ಈ ಶಿಬಿರ ಆಯೋಜಿಸಿವೆ. ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ಹಾಗೂ ಕೇಂದ್ರಿಯ ಪ್ರಭಾರಿ ಡಾ. ಜಯದೀಪ್ ಆರ್ಯ ಅವರು ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ ಎಂದರು.
ಬೆಳಿಗ್ಗೆ 6ರಿಂದ 8ರವರೆಗೆ ಹಾಗೂ ಸಂಜೆ 7ರಿಂದ ರಾತ್ರಿ 8ರವರೆಗೆ ನಿತ್ಯ ಮೂರು ತಾಸು ಶಿಬಿರ ನಡೆಯಲಿದೆ. ದೇಶ- ವಿದೇಶಗಳ 50ಕ್ಕೂ ಹೆಚ್ಚು ಯೋಗ ಸಾಧಕರು ತರಬೇತಿ ನೀಡಲಿದ್ದಾರೆ. ಅಂದಾಜು 2 ಸಾವಿರ ಮಂದಿ ಶಿಬಿರದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.
ಯೋಗ ತರಬೇತಿಯನ್ನು ಚಿತ್ರೀಕರಿಸಿ, ಯೂ ಟ್ಯೂಬ್ ನಲ್ಲಿರುವ ಯೋಗಾಚಾರ್ಯ ಭವರಿಲಾಲ್ ಆರ್ಯ ಚಾನೆಲ್ ನಲ್ಲಿ ಅಪ್ ಲೋಡ್ ಮಾಡಲಾಗುವುದು. ಶಿಬಿರದಲ್ಲಿ ಪಾಲ್ಗೊಳ್ಳಲು ನೋಂದಣಿ ಕಡ್ಡಾಯವಾಗಿದ್ದು, ಆಸಕ್ತರು ಮೊ: 90081 00880/96/99/79 ಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪತಂಜಲಿಯ ರಮೇಶ ಸುಲಾಕೆ, ವಾಮನ ಶಾನಭಾಗ, ಶೈಲಜಾ ಮಡೇಕರ ಹಾಗೂ ಭಾರತ ಸ್ವಾಭಿಮಾನ ಸಂಘಟನೆಯ ಎಂ.ಡಿ. ಪಾಟೀಲ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.