ADVERTISEMENT

‘ಯೋಗ ಸಂಗಮ–2020’ ಜ. 9ರಿಂದ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 10:18 IST
Last Updated 7 ಜನವರಿ 2020, 10:18 IST

ಹುಬ್ಬಳ್ಳಿ: ಯೋಗ ಸ್ಪರ್ಶ ಪ್ರತಿಷ್ಠಾನ ಮತ್ತು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಹಯೋಗದಲ್ಲಿ ಜ. 9ರಿಂದ 12ರವರೆಗೆ ಹುಬ್ಬಳ್ಳಿಯಲ್ಲಿ ‘ಯೋಗ ಸಂಗಮ: 2020’ ಉಚಿತ ಯೋಗ ಪ್ರಶಿಕ್ಷಣ ಶಿಬಿರ ನಡೆಯಲಿದೆ’ ಎಂದು ಸಮಿತಿಯ ಪ್ರಾಂತ ಸಂಚಾಲಕ ಪ್ರಸನ್ನ ದೀಕ್ಷಿತ ಹೇಳಿದರು.

‘ನಗರದ 55 ಕಡೆ ವಸತಿ ಸಹಿತ ಯೋಗ ಶಿಬಿರಗಳನ್ನು ಆಯೋಜಿಸಲಾಗಿದೆ. ದೇಶ–ವಿದೇಶದಿಂದಲೂ ನೂರಾರು ಮಂದಿ ಭಾಗವಹಿಸುವ ಈ ಶಿಬಿರದಲ್ಲಿ ಯೋಗ ಪ್ರವೀಣರು, ಆಧ್ಯಾತ್ಮಿಕ ಸಾಧಕರು, ಚಿಂತಕರು ಹಾಗೂ ಯೋಗ ಶಿಕ್ಷಕರು ತರಬೇತಿ ನೀಡಲಿದ್ದಾರೆ. ಇದುವರೆಗೆ ಎರಡು ಸಾವಿರ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಈ ಪೈಕಿ, 50 ವಿದೇಶಿಯರೂ ಸೇರಿದ್ದಾರೆ’ ಎಂದು ಹುಬ್ಬಳ್ಳಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಜ. 9ರಂದು ಬೆಳಿಗ್ಗೆ 6 ಗಂಟೆಗೆ ಎಲ್ಲಾ ಕಡೆ ಏಕಕಾಲದಲ್ಲಿ ಶಿಬಿರಗಳು ಉದ್ಘಾಟನೆಗೊಳ್ಳಲಿವೆ. ಸತ್ಸಂಗ, ಯೋಗ ನಡಿಗೆ, ಸಮಾರೋಪ ಸೇರಿದಂತೆ ಒಟ್ಟು 19 ಕಾರ್ಯಕ್ರಮಗಳು ನಡೆಯಲಿವೆ. 11ರಂದು ಮಧ್ಯಾಹ್ನ 3.30ಕ್ಕೆ ಯೋಗ ನಡಿಗೆ ಆರಂಭಗೊಳ್ಳಲಿದೆ. ನಗರದ ವಿವಿಧೆಡೆ ನಡೆಯುತ್ತಿರುವ ಶಿಬಿರಗಳಲ್ಲಿ ಭಾಗವಹಿಸಿರುವವರು ಸಂಜೆ 5.30ರ ಹೊತ್ತಿಗೆ ನೆಹರು ಮೈದಾನದಲ್ಲಿ ಸೇರಿಕೊಳ್ಳಲಿದ್ದಾರೆ. ರಾತ್ರಿ 8ರವರೆಗೆ ಕಾರ್ಯಕ್ರಮ ನಡೆಯಲಿದೆ’ ಎಂದರು.

ADVERTISEMENT

‘ಸಾನ್ನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರು ಚನ್ನಸಿದ್ಧರಾಮ ಶಿವಾಚಾರ್ಯ ಭಗವತ್ಪಾದರು ವಹಿಸಲಿದ್ದಾರೆ. ಅತಿಥಿಗಳಾಗಿ ಸಚಿವರಾದ ಪ್ರಹ್ಲಾದ ಜೋಶಿ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ದೇಶಪಾಂಡೆ ಫೌಂಡೇಷನ್‌ನ ಗುರುರಾಜ ದೇಶಪಾಂಡೆ, ಜಿಲ್ಲಾಧಿಕಾರಿ ದೀಪಾ ಚೋಳನ್, ಆಯುಷ್ ಇಲಾಖೆ ಆಯುಕ್ತರಾದ ಮೀನಾಕ್ಷಿ ನೇಗಿ, ಎಸ್‌ಪಿವೈಎಸ್‌ಎಸ್‌ ಕೇಂದ್ರ ಸಮಿತಿ ಅಧ್ಯಕ್ಷ ಸಿ.ವಿ. ಮಹದೇವಯ್ಯ ಭಾಗವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.

ಯೋಗ ಸ್ಪರ್ಶ ಪ್ರತಿಷ್ಠಾನದ ಅಧ್ಯಕ್ಷ ದಯಾನಂದ ಮಗಜಿಕೊಂಡಿ, ಯೋಗ ಸಂಗಮದ ಸಂಚಾಲಕ ಮಂಜುನಾಥ ಬಳಗಾನೂರು, ಪ್ರಮೂಖರಾದ ಸುಧಾಕರ ದಿವಟೆ, ಶಂಕರಣ್ಣ ಮುನವಳ್ಳಿ, ರಾಜಣ್ಣ ಕೊರವಿ, ಪ್ರಕಾಶ ಬೆಂಡಿಗೇರಿ, ಸುಭಾಷ್ ಸಿಂಗ್ ಜಮಾದಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.