
ಹುಬ್ಬಳ್ಳಿ: ‘ರಾಜ್ಯದ ಜನರು ಬಿಜೆಪಿಯವರಿಗೆ ಯಾವತ್ತೂ ಬಹುಮತ ನೀಡಿಲ್ಲ. ಆಪರೇಷನ್ ಕಮಲ ಮಾಡಿಯೇ ಅವರು ಅಧಿಕಾರಕ್ಕೆ ಬಂದಿದ್ದು’ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಸೌದಿ ಅರೇಬಿಯಾದಲ್ಲಿ ಉಮ್ರಾ ಯಾತ್ರೆ ವೇಳೆ ಮದೀನಾದಲ್ಲಿ ನಡೆದ ಬಸ್ ಅಪಘಾತದಲ್ಲಿ ಸಾವನ್ನಪ್ಪಿದ ನಗರದ ಗಣೇಶಪೇಟೆ ನಿವಾಸಿ ಅಬ್ದುಲ್ ಘನಿ ಶಿರಹಟ್ಟಿ ಅವರ ನಿವಾಸಕ್ಕೆ ಗುರುವಾರ ಭೇಟಿ ನೀಡಿ, ಅವರ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ ₹10 ಲಕ್ಷ ಪರಿಹಾರ ನೀಡಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಮುಖ್ಯಮಂತ್ರಿ ಕುರ್ಚಿ ಖಾಲಿ ಇದ್ದಾಗ ಮಾತ್ರ ಸಿಎಂ ಬದಲಾವಣೆ ಬಗ್ಗೆ ಮಾತನಾಡಬೇಕು. ನಮ್ಮದು ಹೈಕಮಾಂಡ್ ಪಕ್ಷವಾಗಿದ್ದು, ಅವರೇ ಈ ವಿಷಯದಲ್ಲಿ ನಿರ್ಣಯ ಕೈಗೊಳ್ಳುತ್ತಾರೆ’ ಎಂದರು.
‘ನಮ್ಮ ಸರ್ಕಾರದ ವತಿಯಿಂದ ಬಡವರಿಗೆ 6ನೇ ಗ್ಯಾರಂಟಿಯಾಗಿ 2 ಲಕ್ಷದ 30 ಸಾವಿರ ಮನೆಗಳನ್ನು ನೀಡಲಾಗುತ್ತಿದೆ. ಜನವರಿ 24ಕ್ಕೆ ಫಲಾನುಭವಿಗಳಿಗೆ ಮನೆಗಳ ಹಸ್ತಾಂತರ ಮಾಡಲಾಗುವುದು. ಕಳೆದ ವರ್ಷ 10 ಜಿಲ್ಲೆಗಳಲ್ಲಿ ₹18 ಸಾವಿರ ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ’ ಎಂದು ಹೇಳಿದರು.
‘ಅಬ್ದುಲ್ ಘನಿ ಶಿರಹಟ್ಟಿ ಅವರ ಕುಟುಂಬಕ್ಕೆ ವೈಯಕ್ತಿಕವಾಗಿ ₹10ಲಕ್ಷ ಪರಿಹಾರ ಕೊಟ್ಟಿದ್ದೇನೆ. ಸರ್ಕಾರದಿಂದಲೂ ₹5 ಲಕ್ಷ ಪರಿಹಾರ ಕೊಡಿಸಲು ಯತ್ನಿಸುತ್ತೇನೆ. ಅವರಿಗೆ ಒಬ್ಬ ಮಗನಿದ್ದು ಅವರಿಗೆ ನಮ್ಮಲ್ಲಿಯೇ ಕೆಲಸ ಕೊಟ್ಟಿದ್ದೇವೆ’ ಎಂದರು.
ಶಾಸಕ ಪ್ರಸಾದ್ ಅಬ್ಬಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.