ADVERTISEMENT

`ಅಭಿವೃದ್ಧಿಗಾಗಿ ಉತ್ತಮರನ್ನು ಆಯ್ಕೆ ಮಾಡಿ'

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:48 IST
Last Updated 24 ಏಪ್ರಿಲ್ 2013, 6:48 IST

ಡಂಬಳ: ಬಿಜೆಪಿ ಸರ್ಕಾರ ಅವಧಿಯಲ್ಲಿಯ ಜಾತಿ ರಾಜಕಾರಣ ಹಾಗೂ ಮಿತಿ ಮೀರಿದ ಭ್ರಷ್ಟಾಚಾರ ತೊಲಗಿಸಿ ಜನರಿಗೆ ನೆಮ್ಮದಿ ಆಡಳಿತ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಹಾಗಾಗಿ ಜನಪರ ಕಾಳಜಿ ಹಾಗೂ ಜನಸಾಮಾನ್ಯರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ರವಿ ದಂಡಿನ ಹೇಳಿದರು.

  ರೋಣ ವಿಧಾನಸಭೆ ಮತಕ್ಷೇತ್ರ ವಿವಿಧ ಗ್ರಾಮಗಳ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು  ಸಾಮಾಜಿಕ ನ್ಯಾಯ, ಆಡಳಿತ ವಿಕೇಂದ್ರೀಕರಣ, ರಾಮ-ರಾಜ್ಯ ಕನಸು ಈಡೇರಲು ಹಾಗೂ ಬಡ, ನಿರ್ಗತಿಕ, ಹಿಂದುಳಿದ, ಅಲ್ಪಸಂಖ್ಯಾತ ವರ್ಗಗಳ ಶ್ರೆಯೋಭಿವೃದ್ಧಿಗಾಗಿ  ಕಾಂಗ್ರೆಸ್ ಬೆಂಬಲಿಸಬೇಕು ಎಂದು ಮನವಿ ಮಾಡಿದರು.  ಜನತೆಯ ಆಶೀರ್ವಾದ ಬಲದಿಂದ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಚುಕ್ಕಾಣಿ ಹಿಡಿಯುವದು ನಿಶ್ಚಿತ ಎಂದರು.

  ಬಿಜೆಪಿ ಚುನಾವಣೆ ಸಮಯದಲ್ಲಿ ಪೊಳ್ಳು ಭರವಸೆ ಹಾಗೂ ಮೊಸಳೆ ಕಣ್ಣೀರು ಹಾಕುವ ಸಂಸ್ಕೃತಿ ಹೊಂದಿದೆ. ಆದರೆ, ರೋಣ ಮತಕ್ಷೇತ್ರದ ಮತದಾರ ಪ್ರಜ್ಞಾವಂತರಾಗಿದ್ದು, ಬಿಜೆಪಿ ಸರ್ಕಾರದ ಅವಧಿಯ ದುರಾಡಳಿತ ಹಾಗೂ ಜನವಿರೋಧಿ ನೀತಿಯಿಂದ ಬೇಸತ್ತು ಬದಲಾವಣೆ ತುಡಿಯುತ್ತಿದ್ದಾರೆ. ಹಾಗಾಗಿ ಚುನಾವಣೆಯಲ್ಲಿ ಮತದಾರ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ರೋಣ ಮತಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್.ಪಾಟೀಲ ಮಾತನಾಡಿ, ಕೇಂದ್ರದಲ್ಲಿ  ಕಾಂಗ್ರೆಸ್ ನೇತೃತ್ವದ ಯುಪಿಯ ಸರ್ಕಾರ ಗ್ರಾಮೀಣ ಅಭಿವೃದ್ಧಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಅಭಿವೃದ್ಧಿ ಕೈಗೊಂಡಿದೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತದಾರ ಮನೆಗಳಿಗೆ ತೆರಳಿ ಕಾಂಗ್ರೆಸ್ ಕೊಡುಗೆ ಮನವರಿಕೆ ಮಾಡಿ ಮತಯಾಚನೆ ಮಾಡಬೇಕು ಮನವಿ ಮಾಡಿದರು. ಕೆಪಿಸಿಸಿ ಸದಸ್ಯ ವಾಸಣ್ಣ ಕುರಡಗಿ ಮಾತನಾಡಿ, ಬಿಜೆಪಿ ಸರ್ಕಾರ ಹಗರಣಗಳ ಸರ್ಕಾರವಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಹಾಲಪ್ಪ ಹರ್ತಿ, ವಸಂತಗೌಡ ಪಾಟೀಲ, ಹನುಮಪ್ಪ ತಾಕಲಕೋಟಿ, ಶಾಂತವೀರ ಗೌಡ ಹಳೆಮನಿ, ಮಾರುತಿ ಛತ್ರಿ, ದಿವರೂರಪ್ಪ ಇದ್ಲಿ, ಮಾಹಾದೇವಪ್ಪ ಇದ್ಲಿ, ಸೋಮಣ್ಣ ಸಿದ್ದನಗೌಡ ಗೌಡರ ಸೇರಿದಂತೆ ಮತ್ತಿತರು ಪಾಲ್ಗೊಂಡಿದ್ದರು.

ನೀತಿ ಸಂಹಿತೆ ಪಾಲನೆಗೆ ಸೂಚನೆ
ನರಗುಂದ:`ಈಗಾಗಲೇ ಚುನಾವಣೆಗೆ ಸಂಪೂರ್ಣ ಸಿದ್ಧತೆ ಮಾಡಲಾಗಿದೆ. ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು ಚುನಾವಣಾ ನೀತಿ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಶಾಂತಿಯುತವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕೆಂದು' ಚುನಾವಣಾ ವೀಕ್ಷಕ ಶಿವಾನಂದ  ಓಝಾ ಹೇಳಿದರು.  ಶನಿವಾರ ನಡೆದ ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಜೊತೆ ನಡೆದ ಸಭೆಯಲ್ಲಿ ಮಾತನಾಡಿದರು.

`ಚುನಾವಣಾ ಆಯೋಗದ  ಸೂಚನೆಯಂತೆ ಅಧಿಕಾರಿಗಳು ಎಲ್ಲ ಚುನಾವಣೆ ಸಿದ್ಧತೆ  ಮಾಡಿಕೊಂಡಿದ್ದಾರೆ. ಅದಕ್ಕೆ ಅಭ್ಯರ್ಥಿಗಳು ಸರಿಯಾದ ರೀತಿಯಲ್ಲಿ ನೀತಿ ಸಂಹಿತೆ ಪಾಲನೆ ಮಾಡಿ ಸುಸಜ್ಜಿತವಾಗಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಬೇಕು' ಎಂದು ಹೇಳಿದರು.

ಚುನಾವಣಾಧಿಕಾರಿ ಶಶಿಧರ  ಕುರೇರ ಮಾತನಾಡಿ  `ನರಗುಂದ  ಮತಕ್ಷೇತ್ರದಲ್ಲಿ ಅಂತಿಮವಾಗಿ ಕಣದಲ್ಲಿ 11 ಅಭ್ಯರ್ಥಿಗಳಿದ್ದಾರೆ. ಎಲ್ಲ ಅಭ್ಯರ್ಥಿಗಳು ಚುನಾ ವಣಾ ನೀತಿ ಸಂಹಿತೆ ಬಗ್ಗೆ ಸಂಪೂರ್ಣವಾಗಿ ತಿಳಿದು ಕೊಳ್ಳಬೇಕು. ನಿಗದಿಪಡಿಸಿದ ಚುನಾವಣಾ  ವೆಚ್ಚಕ್ಕೆ ಅನುಗುಣವಾಗಿ  ಖರ್ಚು ಮಾಡಬೇಕು.

ನಾಮಪತ್ರ ಸಲ್ಲಿಸಿದ ದಿನದಿಂದ ಖರ್ಚು ವೆಚ್ಚದ ವಿವರಗಳನ್ನು ನೀಡಬೇಕು. ವಾಹನಗಳ  ಅನುಮತಿ ಮೇ. 3ರಂದು ಸಂಜೆ 5 ಗಂಟೆಯವರೆಗೆ  ಮಾತ್ರ ನೀಡಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.