ADVERTISEMENT

ಅಲ್ಪಸಂಖ್ಯಾತರ ಅಭಿವೃದ್ಧಿಗೆ ಇಚ್ಛಾಶಕ್ತಿಯ ಕೊರತೆ: ಬಶೀರ್

ಮೇ ಸಾಹಿತ್ಯ ಮೇಳದಲ್ಲಿ ಅಭಿವೃದ್ಧಿ, ಅಲ್ಪಸಂಖ್ಯಾತರು ಗೋಷ್ಠಿ

​ಪ್ರಜಾವಾಣಿ ವಾರ್ತೆ
Published 5 ಮೇ 2019, 15:08 IST
Last Updated 5 ಮೇ 2019, 15:08 IST
ಗದುಗಿನ ಅಂಬೇಡ್ಕರ್ ಭವನದಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ಅಭಿವೃದ್ಧಿ, ಅಲ್ಪಸಂಖ್ಯಾತರು ಗೋಷ್ಠಿ ನಡೆಯಿತು. ಸಾಹಿತಿ ಬಿ.ಎಂ.ಬಶೀರ್, ಲಿನೆಟ್ ಡಿಸಿಲ್ವ ಇದ್ದರು
ಗದುಗಿನ ಅಂಬೇಡ್ಕರ್ ಭವನದಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ಅಭಿವೃದ್ಧಿ, ಅಲ್ಪಸಂಖ್ಯಾತರು ಗೋಷ್ಠಿ ನಡೆಯಿತು. ಸಾಹಿತಿ ಬಿ.ಎಂ.ಬಶೀರ್, ಲಿನೆಟ್ ಡಿಸಿಲ್ವ ಇದ್ದರು   

ಗದಗ: ‘ಅಲ್ಪಸಂಖ್ಯಾಂತರು ಎಂದರೆ ಕಣ್ಣೆದುರಿಗೆ ಬರುವುದು ಮುಸ್ಲಿಮರು, ಅಲ್ಪಸಂಖ್ಯಾತರ ಹೆಸರಿನಲ್ಲಿಎಲ್ಲ ಲಾಭ ಪಡೆದು ಕೊಬ್ಬಿದ್ದಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇದು ರಾಜಕೀಯ ಪೂರ್ವಾಗ್ರಹ ಪೀಡಿತವಾದ ಮನಸ್ಥಿತಿಯಾಗಿದೆ’ ಎಂದು ಸಾಹಿತಿ ಬಿ.ಎಂ.ಬಶೀರ್ ಹೇಳಿದರು.

ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆದ ಮೇ ಸಾಹಿತ್ಯ ಮೇಳದಲ್ಲಿ ಅಭಿವೃದ್ಧಿ, ಅಲ್ಪಸಂಖ್ಯಾತರು ಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಭಾರತದಲ್ಲಿ ಹಿಂದೂಗಳ್ಯಾರು ಮುಸ್ಲಿಮರಾಗಿ ಮತಾಂತರವಾಗಿಲ್ಲ. ವೃತ್ತಿ ಜಾತಿಗಳ ಕೆಲವು ಜನ ಮುಸ್ಲಿಮರಾಗಿ ಮತಾಂತರಗೊಂಡಿದ್ದಾರೆ. ಮುಸ್ಲಿಂ ಸಮುದಾಯವು ಹಲವಾರು ಸಮಸ್ಯೆ ಹಾಗೂ ಸವಾಲುಗಳನ್ನು ಎದುರಿಸುತ್ತಿದೆ. ಪರಿಹಾರಕ್ಕಾಗಿ ಪ್ರಭುತ್ವ ತಮ್ಮ ರಾಜಕೀಯ ಇಚ್ಛಾಶಕ್ತಿ ತೋರುತ್ತಿಲ್ಲ’ ಎಂದರು.

ADVERTISEMENT

‘ಉತ್ತರ ಭಾರತದಲ್ಲಿ ಮುಸ್ಲಿಮರಲ್ಲಿ ಜಾತಿ ವ್ಯವಸ್ಥೆ ದೊಡ್ಡದಾಗಿದೆ. ಹಲವಾರು ಜಾತಿಗಳ ನಡುವೆ ತಾರತಮ್ಯವಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರ ತುಷ್ಟೀಕರಣ ಮಾಡುತ್ತಿದೆ ಎಂಬ ಮಾತು ಮುಸ್ಲಿಮರನ್ನೇ ವಿರೋಧಿಗಳಾಗಿ ಮಾಡಲಾಗುತ್ತಿದೆ. ಆದರೆ, ಅಲ್ಪಸಂಖ್ಯಾತರಕಷ್ಟಗಳು ಕುರಿತು ಸಾಚಾರ್ ಸಮಿತಿಯ ವರದಿಗೆ ಕಾಂಗ್ರೆಸ್ ಮಹತ್ವ ನೀಡಲೇ ಇಲ್ಲ. ಒಂದು ಕಡೆ ಬಾಬ್ರಿ ಮಸೀದಿಯ 204 ಎಕರೆ ಭಾಗ ಇಡೀ ಮುಸ್ಲಿಮರಸಾವು, ಬದುಕಿನ ಭಾಗ ಎಂಬಂತೆ ಮಾಡಲಾಗಿದೆ. ಇದೇ ವೇಳೆಯಲ್ಲಿ ವಕ್ಫ ಬಳಿ ಇರುವ ನೂರಾರು ಎಕರೆ ಆಸ್ತಿಗಳನ್ನು ಕೆಲವು ಮುಸ್ಲಿಂನಾಯಕರೇ ಕಬಳಿಸುತ್ತಿದ್ದಾರೆ. ಈ ಆಸ್ತಿಯನ್ನು ಮರಳಿ ವಶ ಮಾಡಿಕೊಂಡು ಸಮುದಾಯದ ಜನರ ಬದುಕನ್ನು ಅಭಿವೃದ್ಧಿ ಮಾಡುವ ಕೆಲಸಗಳು ನಡೆಯುತ್ತಿಲ್ಲ. ಮುಸ್ಲಿಂ ಪ್ರಗತಿಪರರು ಸಮುದಾಯದ ಹೊರಗೆ ನಿಂತು ಕೆಲಸ ಮಾಡುತ್ತಿದ್ದಾರೆ. ಆದರೆ, ಸಮುದಾಯದ ಒಳಗೆ ನಿಂತು ಮುಸ್ಲಿಮರಲ್ಲಿ ಅರಿವು ಮೂಡಿಸಿ, ಅವರ ಬದುಕನ್ನು ರೂಪಿಸಲು ಯತ್ನಿಸಬೇಕಾಗಿರುವುದು ಇಂದಿನ ತುರ್ತು ಅಗತ್ಯವಾಗಿದೆ’ ಎಂದರು.

‘ಕ್ರಿಶ್ಚಿಯನ್ ಸಮುದಾಯದ ಹಲವಾರು ತಲ್ಲಣಗಳನ್ನು ಅನುಭವಿಸುತ್ತಿದೆ. ಯಾವುದೇ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಲು ಮುಂದಾದರೂ, ಆ ಕಾರ್ಯಕ್ರಮಗಳನ್ನು ಮತಾಂತರ ಮಾಡುವ ಉದ್ದೇಶಕ್ಕಾಗಿಯೇ ಮಾಡುತ್ತಿದ್ದಿರಿ ಎಂದು ಹುಯಿಲೇಬ್ಬಿಸುವ ಹುನ್ನಾರಗಳು ನಡೆಯುತ್ತಿವೆ. ಕ್ರಿಶ್ಚಿಯನ್ ಸಮುದಾಯದ ಹಲವು ರೀತಿಯ ಆತಂಕ ಹಾಗೂ ಸಮಸ್ಯೆಗಳನ್ನು ಎದುರಿಸುತ್ತಿದೆ. ಅಭಿವೃದ್ಧಿ ಎಂದರೆ, ಕೆಲವು ಜನರ ಅಭಿವೃದ್ಧಿಯಾದಂತಾಗಿದೆ. ಇಡೀ ಜನ ಸಮುದಾಯದ ಅಭಿವೃದ್ಧಿಯಾಗಬೇಕಾದ ಗಂಭೀರ ಪ್ರಯತ್ನಗಳಾಗಬೇಕಿದೆ’ ಎಂದು ಸಾಹಿತಿ ಲಿನೆಟ್ ಡಿಸಿಲ್ವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.