ADVERTISEMENT

ಆರೋಗ್ಯದ ಕಡೆ ಗಮನ ಹರಿಸಿ: ಡಿಸಿ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2011, 11:00 IST
Last Updated 22 ಅಕ್ಟೋಬರ್ 2011, 11:00 IST

ಗದಗ: ಪೊಲೀಸ್ ಸಿಬ್ಬಂದಿ ಆರೋಗ್ಯ ರಕ್ಷಣೆ ಕಡೆ ಹೆಚ್ಚು ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್. ಶಂಕರನಾರಾಯಣ ಕಿವಿಮಾತು ಹೇಳಿದರು.

ಬೆಟಗೇರಿಯ ಜಿಲ್ಲಾ ಪೊಲೀಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಪೊಲೀಸ ಹುತಾತ್ಮರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪೊಲೀಸರಿಗೆ ಸದೃಢ ಆರೋಗ್ಯ ಹಾಗೂ ಗಟ್ಟಿ ಮನಸ್ಸು ಬಹಳ ಅಗತ್ಯ. ಇವೆರಡು ಒಟ್ಟಾಗಿ ಸೇರಿದರೆ ಸೇವೆಯನ್ನು ಚೆನ್ನಾಗಿ ಮಾಡಬಹುದು. ಆದ್ದರಿಂದ ಪೊಲೀಸರು ದೈಹಿಕ ಹಾಗೂ ಮಾನಸಿಕ ಆರೋಗ್ಯದ ಕಡೆಗೆ ಕಾಳಜಿ ವಹಿಸಬೇಕು ಎಂದರು.

ಪೊಲೀಸ ಠಾಣೆಗಳಿಗೆ ದೂರು ಸಲ್ಲಿಸಲು ಬರುವ ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸಿ ಬಂದವರ ಕುಂದುಕೊರತೆಗಳನ್ನು ಪ್ರಾಮಾಣಿಕತೆಯಿಂದ ಬಗೆಹರಿಸಬೇಕು ಎಂದು ತನ್ಮೂಲಕ ಪೊಲೀಸ ಇಲಾಖೆ ಹಾಗೂ ಸಾರ್ವಜನಿಕರ ನಡುವೆ ಅಂತರವನ್ನು ಕಡಿಮೆ ಮಾಡಲು ಪ್ರಯತ್ನಿಸಬೇಕು.

ಶಾಂತಿ, ಸುವ್ಯವಸ್ಥೆಯನ್ನು ಕಾಪಾಡುವ, ಸಾರ್ವಜನಿಕರ ಆಸ್ತಿ–– -ಪಾಸ್ತಿಯನ್ನು ರಕ್ಷಣೆ ಮಾಡುವ ಪೊಲೀಸ ಇಲಾಖೆಯು ತ್ಯಾಗ ಮತ್ತು ಬಲಿದಾನದ ಪ್ರತೀಕವಾಗಿದೆ. ಪಾರದರ್ಶಕತೆ, ಪಕ್ಷಪಾತ ರಹಿತ ಸೇವೆಯ ಮುಂದೆ ಬೇರೆ ಯಾವುದು ಸಮಾನವಲ್ಲ. ಆದ್ದರಿಂದ ಪೊಲೀಸರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಭಕ್ತಿ, ಗೌರವದಿಂದ ಮಾಡಬೇಕು ಎಂದರು.

ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರವಿಕುಮಾರ ನಾಯಕ ಹುತಾತ್ಮ ಪೊಲೀಸರ ಸ್ಮರಣೆ ಮಾಡಿದರು. ಡಿವೈಎಸ್‌ಪಿ ಸುರೇಶ ಮಸೂತಿ, ಸಿಪಿಐಗಳಾದ ನಾಗರಾಜ ಅಂಬಲಿ, ವಿಜಯ ಬಿರಾದಾರ, ಆರ್.ಎಸ್. ಬೆಂತೂರ, ಬಿ.ವಿ. ಪಾಟೀಲ, ಫೈಯಾಜುದ್ದೀನ್ ಮತ್ತಿತರರು ಹಾಜರಿದ್ದರು.


ಇದಕ್ಕೂ ಮೊದಲು ನಗರದ ಗಣ್ಯರು ಹಾಗೂ ನಾಗರಿಕರು ಹುತಾತ್ಮ ಸ್ಮಾರಕಕ್ಕೆ ಪುಷ್ಪ ಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT