ಹುಲಕೋಟಿ (ಗದಗ ತಾ.): `ಸಂವಿಧಾನ, ಸಮಾನತೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ ನೀಡದ ಆರ್ಎಸ್ಎಸ್ ಹಿಡಿತದಲ್ಲಿ ರಾಜ್ಯ ಸರ್ಕಾರ ಇದೆ' ಎಂದು ವಿಚಾರವಾದಿ ಪ್ರೊ.ಜಿ.ಕೆ. ಗೋವಿಂದರಾವ್ ಆಕ್ರೋಶ ವ್ಯಕ್ತಪಡಿಸಿದರು.
ತಾಲ್ಲೂಕಿನ ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರದಲ್ಲಿ ಸಮಾರೋಪ ಭಾಷಣ ಮಾಡಿದ ಅವರು, `ರಾಜ್ಯ ಸರ್ಕಾರ ಐದು ವರ್ಷಳಲ್ಲಿ ಹಗರಣ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿದೆ. ದುಷ್ಟರು ಮತ್ತು ನೀಚರು ಬೆಳೆಯುವ ಹಾಗೆ ಮಾಡಿದೆ.
114 ಸ್ಥಾನ ಇಟ್ಟುಕೊಂಡೇ ಈ ರೀತಿ ಮಾಡಿದೆ. ಇನ್ನೂ 140 ಸ್ಥಾನ ಬಂದರೆ ಆರ್ಎಸ್ಎಸ್, ಬಿಜೆಪಿ, ಬಜರಂಗ ದಳ, ಮಠಗಳು, ಬಿಜೆಪಿ ಪರವಾದ ಶಕ್ತಿಗಳು ಚಿಗುರಿಕೊಂಡರೆ ದೇಶಕ್ಕೆ ಭವಿಷ್ಯವಿಲ್ಲ' ಎಂದು ಎಚ್ಚರಿಸಿದರು.
`ಎರಡು ಸಾವಿರ ಜನರನ್ನು ಕೊಂದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲಾಗುತ್ತಿದೆ. ಯಡಿಯೂರಪ್ಪ ಮತ್ತು ಮೋದಿ ಅವರು ಆರೋಪಿಗಳು ಅಪರಾಧಿಗಳಲ್ಲ' ಎಂಬ ಧರ್ಮ ಗುರುಗಳ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಹುಟ್ಟಿದ ಜಾತಿಯಲ್ಲಿಯೇ ಮುಖ್ಯವಾಹಿನಿಗೆ ಬರಲು ಪ್ರಯತ್ನಿಸಬೇಕು. ನಮ್ಮ ಮಠ ಸಂಸತ್ ಭವನ ಎಂಬುದನ್ನು ಮರೆಯ ಬಾರದು' ಎಂದರು.
ಗಾಂಧಿ, ಅಂಬೇಡ್ಕರ್, ಬಸವಣ್ಣರನ್ನು ಮತ್ತೆ ಹುಟ್ಟಿ ಬಾ ಎಂದರೆ ಸೋಲು ಒಪ್ಪಿಕೊಂಡಂತೆ. ಮನುಷ್ಯರಾಗಿ ಹುಟ್ಟಿದ ಮೇಲೆ ಏನಾದರೂ ಸಾಧಿಸ ಬೇಕು ಎಂದರು.
`ದೇಶ ಬದಲಾವಣೆ ಮಾಡುವ ಶಕ್ತಿ ಯುವಕರಲ್ಲಿದೆ. ಪುಸ್ತಕಗಳನ್ನು ಓದುವ ಮೂಲಕ ಜ್ಞಾನರ್ಜನೆ ಹೆಚ್ಚಿಸಿಕೊಳ್ಳಬೇಕು. ದಲಿತರಲ್ಲಿ ಶೇ. 15ರಷ್ಟು ಮಾತ್ರ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಹೆಣ್ಣುಮಕ್ಕಳ ಸಂಖ್ಯೆ ತೀರಾ ಕಡಿಮೆ' ಎಂದು ತೋಂಟದಾರ್ಯ ಮಠದ ಡಾ.ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ರಾಜ್ಯ ಸಂಚಾಲಕ ಲಕ್ಷ್ಮಿನಾರಾಯಣ ನಾಗವಾರ, ಬಸವರಾಜ ಮುಧೋಳ, ಎ.ಎಸ್.ಮಕಾನದಾರ, ಶೋಭಾ ಕಟ್ಟಿಮನಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.