ADVERTISEMENT

ಆಶ್ರಯ ಮನೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2017, 5:34 IST
Last Updated 1 ಜುಲೈ 2017, 5:34 IST
ಅರ್ಹರಿಗೆ ಆಶ್ರಯ ನಿವೇಶನ ವಿತರಿಸುವಂತೆ ಆಗ್ರಹಿಸಿ ಶುಕ್ರವಾರ ಲಕ್ಷ್ಮೇಶ್ವರ ಸಮೀಪದ ಸೂರಣಗಿ ಗ್ರಾಮ ಪಂಚಾಯಿತಿ ಎದುರು ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು
ಅರ್ಹರಿಗೆ ಆಶ್ರಯ ನಿವೇಶನ ವಿತರಿಸುವಂತೆ ಆಗ್ರಹಿಸಿ ಶುಕ್ರವಾರ ಲಕ್ಷ್ಮೇಶ್ವರ ಸಮೀಪದ ಸೂರಣಗಿ ಗ್ರಾಮ ಪಂಚಾಯಿತಿ ಎದುರು ವಿವಿಧ ಕನ್ನಡಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದರು   

ಲಕ್ಷ್ಮೇಶ್ವರ: ಉದ್ಯೋಗ ಖಾತ್ರಿ ಹಣ ನೀಡುವಂತೆ ಹಾಗೂ ನಿವೇಶನರಹಿತ ಬಡವರಿಗೆ ಆಶ್ರಯ ಮನೆ ನೀಡಬೇಕು ಎಂದು ಆಗ್ರಹಿಸಿ ಇಲ್ಲಿಗೆ ಸೂರಣಗಿ ಗ್ರಾಮ ಪಂಚಾಯ್ತಿ ಎದುರು ಕರವೇ ಹಾಗೂ ಜಯ ಕರ್ನಾಟಕ ಸಂಘಟನೆ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯ್ತಿಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿದ್ದು ಬಡವರಿಗೆ ವಿತರಿಸಬೇಕಾದ ಆಶ್ರಯ ಮನೆಗಳನ್ನು ಈಗಾಗಲೆ ಮನೆ ಇದ್ದವರಿಗೆ, ಮದುವೆ ಮಾಡಿಕೊಟ್ಟ ಹೆಣ್ಣು ಮಕ್ಕಳಿಗೆ, ಬೆಂಬ ಲಿಗರಿಗೆ, ತಮ್ಮ ಸಂಬಂಧಿಕರಿಗೆ ಹಾಗೂ ಹಣ ನೀಡಿದವರಿಗೆ ಹಂಚಿಕೆ ಮಾಡಿದ್ದಾರೆ.

ಅಲ್ಲದೆ ವಿದ್ಯಾರ್ಥಿಗಳ ಮತ್ತು ಮರಣ ಹೊಂದಿದವರ ಹೆಸರಿನಲ್ಲಿ ಜಾಬ್ ಕಾರ್ಡ್‌ ಸೃಷ್ಟಿಸಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೂಲಿ ಕೆಲಸ ಮಾಡಿದ್ದಾರೆ ಎಂದು ಬಿಲ್ ತೆಗೆಯಲಾಗಿದೆ. ಅಲ್ಲದೆ ಸರ್ಕಾರದ ಯೋಜನೆಗಳ ಮಾಹಿತಿಯನ್ನು ಅಧಿಕಾರಿಗಳು ಸಾರ್ವ ಜನಿಕರಿಗೆ ಕಾಣುವಂತೆ ನೊಟೀಸ್ ಬೋರ್ಡ್‌ನಲ್ಲಿ ಹಾಕಿ ತಿಳಿಸುತ್ತಿಲ್ಲ. ಆದಾಯ ಪ್ರಮಾಣಪತ್ರ ಇತರ ಸರ್ಕಾರಿ ಕಾಗದ ಪತ್ರ ನೀಡುವ ಕಂಪ್ಯೂಟರ್ ಸಹಾಯಕರು ಇಲ್ಲ. ಗ್ರಾಮದಲ್ಲಿ ಅಭಿ ವೃದ್ಧಿ ಕೆಲಸಗಳು ನಡೆಯುತ್ತಿಲ್ಲ ಎಂದು ಪ್ರತಿಭಟನೆಕಾರರು ಆರೋಪಿಸಿದರು.

ADVERTISEMENT

ಈ ಸಂದರ್ಭದಲ್ಲಿ ಜಯ ಕರ್ನಾಟಕ ಸಂಘಟನೆಯ ಸೂರಣಗಿ ಗ್ರಾಮ ಘಟಕದ ಅಧ್ಯಕ್ಷ ಕುಮಾರ ಬೆಟಗೇರಿ ಹಾಗೂ ಬಸಯ್ಯ ಮಾದಾಪುರಮಠ ಮಾತನಾಡಿ, ‘ಗ್ರಾಮದಲ್ಲಿ ಕಳೆದ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಹಾಗೂ ಅಧಿಕಾರಿಗಳು ಸೇರಿ ಕಾಟಾಚಾರಕ್ಕೆ ಗ್ರಾಮ ಸಭೆ ನಡೆಸಿದ್ದಾರೆ. ಆಶ್ರಯ ಮನೆಯ ಫಲಾನುಭವಿಗಳನ್ನು ಆಯ್ಕೆ ಮಾಡುವಲ್ಲಿ ಎಡವಿದ್ದಾರೆ. ಗ್ರಾಮದಲ್ಲಿ ಸರಿಯಾದ ಚರಂಡಿಗಳಿಲ್ಲ. ಹಲವಾರು ತಿಂಗಳ ಹಿಂದೆ ನರೇಗಾ ಕೂಲಿ ಕೆಲಸ ಮಾಡಿ ದ್ದರೂ ಇನ್ನೂ ಹಣ ಜಮಾ ಆಗಿಲ್ಲ’ ಎಂದು ಆರೋಪಿಸಿದರು.

ಗ್ರಾಮ ಪಂಚಾಯ್ತಿಯಲ್ಲಿ ಶುಕ್ರವಾರ ಸಾಮಾನ್ಯ ಸಭೆ ನಡೆಯುತ್ತಿದೆ ಎಂದು ಅರಿತ ಕರವೇ ಮತ್ತು ಜಯ ಕರ್ನಾಟಕ ಸಂಘಟನೆಗಳ ಪದಾಧಿಕಾರಿಗಳು ಸಾಮಾನ್ಯ ಸಭೆಯಲ್ಲಿದ್ದ ಗ್ರಾಮ ಪಂಚಾ ಯಿತಿ ಅಧ್ಯಕ್ಷರು, ಸದಸ್ಯರು ಮತ್ತು ಪಿಡಿಒ ಅವರು ಸಭೆಯಿಂದ ಹೊರ ಬಂದು ನಮ್ಮ ಸಮಸ್ಯೆ ಆಲಿಸಿ ಮುಂದೆ ಸಭೆ ನಡೆಸುವಂತೆ ಒತ್ತಾಯಿಸಿದರು. ಆದರೆ ಅವರ ಮಾತಿಗೆ ಓಗೊಡದೆ ಸಭೆ ನಡೆಸಲು ಮುಂದಾದಾಗ ಸಂಘಟನೆಗಳ ಸದಸ್ಯರು ಪ್ರತಿಭಟನೆಗೆ ಇಳಿದರು.

ನಂತರ ಪ್ರತಿಭಟನಾಕಾರರನ್ನು ಉದ್ದೇಶಿಸಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿರುಪಾಕ್ಷಪ್ಪ ಶೀರನಹಳ್ಳಿ ಮಾತನಾಡಿ ‘ನಮ್ಮ ಪಂಚಾಯಿತಿಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಸತ್ತವರ ಹೆಸರಲ್ಲಿ ಬಿಲ್ ತೆಗೆದಿಲ್ಲ. ಒಂದು ವೇಳೆ ಅಂತಹ ಘಟನೆ ನಡೆದಿದ್ದರೆ ಆ ಹಣ ಮುಟ್ಟು ಗೋಲು ಹಾಕಿಕೊಳ್ಳಲಾಗುವುದು. ಆಶ್ರಯ ಮನೆ ವಿತರಣೆಯಲ್ಲಿ ನಡೆದಿದೆ ಎನ್ನಲಾಗಿದ ಲೋಪಗಳ ಬಗ್ಗೆ ಮಾಹಿತಿ ಪಡೆದು ಅಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗುವುದು’ ಎಂದು ಸ್ಪಷ್ಟಪಡಿಸಿದರು.

ಪಿಡಿಒ ಎಂ.ಎನ್.ಮಲ್ಲೂರ ಇದ್ದರು. ಪ್ರತಿಭಟನೆಯಲ್ಲಿ ರಮೇಶ ಹಂಗನಕಟ್ಟಿ, ಅಶೋಕ ಹಾವೇರಿ, ನಾಗರಾಜ ಕಳ್ಳಿ ಹಾಳ, ಚಿದಾನಂದ ಮೇಲ್ಮುರಿ, ಈರಣ್ಣ ಬಳಿಗಾರ, ಶರಣಪ್ಪ ಮುತಗಾರ, ಚಿಕ್ಕಪ್ಪ ಬೆಟಗೇರಿ, ಬಸವರಾಜ ಮೇಲ್ಮುರಿ, ಬಸವ ರಾಜ ಹರಪನಹಳ್ಳಿ, ನಿಂಗಪ್ಪ ಮಡಿವಾ ಳರ, ನಾಗಯ್ಯ ಮಠಪತಿ, ಬಸವರಾಜ ಬಳಿಗಾರ ಹಾಗೂ ಸ್ಥಳೀಯ ಗ್ರಾಮಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.