ADVERTISEMENT

ಎಂಜಿನಿಯರಿಂಗ್‌ಗೆ ವಿಫುಲ ಅವಕಾಶ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2011, 6:40 IST
Last Updated 26 ಸೆಪ್ಟೆಂಬರ್ 2011, 6:40 IST

ಮುಂಡರಗಿ: `ಉನ್ನತ ಹಾಗೂ ಎಂಜಿನಿಯರಿಂಗ್ ವಿದ್ಯಾರ್ಹತೆ ಹೊಂದಿರುವ ಯುವಕ, ಯುವತಿಯರಿಗೆ ಇಂದು ಜಗತ್ತಿನಾದ್ಯಂತ ವಿಫುಲ ಉದ್ಯೋಗಾವಕಾಶಗಳಿವೆ ಎಂದು ಕವಿವಿಯ ಉದ್ಯೋಗ, ಮಾಹಿತಿ ಮತ್ತು ಮಾರ್ಗದರ್ಶನದ ಮುಖ್ಯಸ್ಥ ಡಾ.ಎಸ್.ವಿ.ಹಿತ್ತಲಮನಿ ತಿಳಿಸಿದರು.

 ಧಾರವಾಡದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಸ್ಥಳೀಯ ಕ.ರಾ.ಬೆಲ್ಲದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರಗಳು ಈಚೆಗೆ ಕ.ರಾ.ಬೆಲ್ಲದ ಕಾಲೇಜಿನಲ್ಲಿ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ವೃತ್ತಿ ಸಾಹಿತ್ಯ ಪ್ರದರ್ಶನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ವಿದ್ಯಾಭ್ಯಾಸದ ನಂತರ ಯುವಕ ಯುವತಿಯರಿಗೆ ವೃತ್ತಿ ಕೌಶಲಕ್ಕೆ ಸಂಬಂಧಿಸಿದಂತೆ ಸ್ಪೋಕನ್ ಇಂಗ್ಲಿಷ್, ವ್ಯಕ್ತಿತ್ವ ವಿಕಸನ, ಸಂವಹನ ಕಲೆ ಕುರಿತಂತೆ ಉದ್ಯೋಗ ಮಾಹಿತಿ ಕೇಂದ್ರದಲ್ಲಿ ವಿವಿಧ ಕಾರ್ಯಾಗಾರ, ತರಬೇತಿ, ಮಾರ್ಗದರ್ಶನ ಶಿಬಿರಗಳನ್ನು ಹಮ್ಮಿಕೊಳ್ಳಲಾಗುತ್ತದೆ. ವಿದ್ಯಾವಂತ ನಿರುದ್ಯೋಗಿಗಳು ಅವುಗಳ ಸದುಪಯೋಗ ಪಡೆದುಕೊಳ್ಳಬೇಕು~ ಎಂದು ಅವರು ಸಲಹೆ ನೀಡಿದರು.

`ಉನ್ನತ ಶಿಕ್ಷಣ ಪಡೆದುಕೊಂಡಿರುವ ವಿದ್ಯಾವಂತ ಯುವಕ ಯುವತಿಯರು ತಮಗೆ ದೊರೆತ ಕೆಲಸವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು.  ವಿವಿಧ ರಂಗಗಳಲ್ಲಿ ಸ್ವಉದ್ಯೋಗ ಪಡೆದುಕೊಂಡು ಜೀವನದಲ್ಲಿ ಮುಂದೆ ಬರಬೇಕು~ ಎಂದು ಸಾನ್ನಿಧ್ಯ ವಹಿಸಿದ್ದ ಡಾ.ಅನ್ನದಾನೀಶ್ವರ ಸ್ವಾಮೀಜಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

`ಕೆಲಸದಲ್ಲಿ ನಿಷ್ಠೆ ಇರುವವರಿಗೆ ಮತ್ತು ಉದ್ಯೋಗಕ್ಕೆ ಸಂಬಂಧಿಸಿದಂತೆ ವೃತಿ ಕೌಶಲವನ್ನು ಹೊಂದಿದವರಿಗೆ ಎಲ್ಲಿ ಬೇಕಾದರೂ ಕೆಲಸ ದೊರೆಯುತ್ತವೆ. ಪ್ರಸ್ತುತ ಇಂದು ಕೆಲಸ ಗಿಟ್ಟಿಸಿಕೊಳ್ಳಲು ಬೇಕಾಗುವ ಎಲ್ಲ ತರಬೇತಿಯನ್ನು ಯುವಕರು ಪಡೆದುಕೊಳ್ಳುವುದು ಉತ್ತಮ. ಆ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರದ ಕಾರ್ಯ ಶ್ಲಾಘನೀಯ~ ಎಂದು  ಅಧ್ಯಕ್ಷತೆ ವಹಿಸಿದ್ದ ಆರ್.ಬಿ.ಡಂಬಳಮಠ ತಿಳಿಸಿದರು.

ಎ.ಕೆ. ಬೆಲ್ಲದ ಸಮಾರಂಭವನ್ನು ಉದ್ಘಾಟಿಸಿದರು. ಡಾ.ಎಸ್.ಪಿ.ಹಳ್ಳಾಳ ಮಾತನಾಡಿದರು. ಪ್ರಾಚಾರ್ಯ ಎಸ್.ಬಿ. ಕರಿಭರಮಗೌಡರ ಸ್ವಾಗತಿದರು. ಡಾ.ಎಂ.ಬಿ.ಬೆಳವಟಗಿಮಠ ನಿರೂಪಿಸಿದರು.

ನಂತರ ಡಾ.ಎಸ್.ಪಿ.ಹಳ್ಳಾಳ `ವ್ಯಕ್ತಿತ್ವ ವಿಕಸನ~, ಪ್ರತಿಭಾ ಮಠ `ಸಂವಹನ ಕಲೆ, ರೆಜ್ಯೂಮ ರೈಟಿಂಗ್ ಮತ್ತು ಸಂದರ್ಶನ~, ಆರ್.ಬಿ.ವನಹಳ್ಳಿ `ವೃತ್ತಿ ಮಾರ್ಗದರ್ಶನ~ ಹಾಗೂ ಶ್ಯಾಮಲಾ ವೈದ್ಯ `ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದು ಹೇಗೆ?~ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.