ರೋಣ: ಇಪ್ಪತ್ತು ದಿನಗಳಾದರೂ ಕುಡಿಯುವ ನೀರು ಬಿಟ್ಟಿಲ್ಲ ಎಂದು ರೋಣ ಪಟ್ಟಣದ ಶಿವಪೇಟೆ 1ನೇ ಕ್ರಾಸ್ ನಿವಾಸಿಗಳು ರೋಣ– ಗಜೇಂದ್ರಗಡ ಹೆದ್ದಾರಿ ತಡೆದು ಭಾನುವಾರ ಪ್ರತಿಭಟನೆ ನಡೆಸಿದರು. ಇದರಿಂದ ಒಂದು ಗಂಟೆ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಆದರೆ ಪ್ರತಿಭಟನಾ ನಿರತ ಮಹಿಳೆಯರು ಪೊಲೀಸರ ಮನವಿಗೆ ಸ್ಪಂದಿಸದೇ ನೀರು ಬಿಟ್ಟ ನಂತರವೇ ಪ್ರತಿಭಟನೆ ಕೈಬಿಡುತ್ತೇವೆ ಇಲ್ಲವಾದರೆ ಇಲ್ಲೇ ಕುಳಿತುಕೊಳ್ಳುತ್ತೇವೆ ಎಂದರು.
ನಂತರ ಪೊಲೀಸರು ಪುರಸಭೆ ನೀರು ಸರಬರಾಜು ವಿಭಾಗದ ವ್ಯವಸ್ಥಾಪಕ ಶಂಕ್ರಪ್ಪ ಅವರನ್ನು ಕರೆಯಿಸಿದರು. ಈ ಸಂದರ್ಭದಲ್ಲಿ ಶಂಕ್ರಪ್ಪ ಮತ್ತು ಪ್ರತಿಭಟನಾಕಾರರ ನಡುವೆ ವಾಗ್ವಾದ ನಡೆಯಿತು. ಆಗ ಶಂಕ್ರಪ್ಪ ಮೇಲಧಿಕಾರಿಗಳ ಜೊತೆ ದೂರವಾಣಿ ಮೂಲಕ ಮಾತನಾಡಿ, ಲಭ್ಯ ಇರುವ ನೀರು ಕೆಸರಿನಿಂದ ಕೂಡಿದ್ದು, ಕೆಲ ಗಂಟೆ ಸಮಯ ಕೊಟ್ಟರೆ ನೀರನ್ನು ಶುದ್ಧೀಕರಿಸಿ ಬಿಡಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಈ ಭರವಸೆಯ ನಂತರ ಪ್ರತಿಭಟ ಸ್ಥಗಿತಗೊಳಿಸಲಾಯಿತು.
ಪೊಲೀಸ್ ಸಿಬ್ಬಂದಿ ಎಂ.ಜಿ.ನಾಯಕ ಮತ್ತು ಮಂಜುನಾಥ ಕುರಿ ಬಾದಾಮಿ ರಸ್ತೆಯಲ್ಲಿರುವ ನೀರು ಸಂಗ್ರಹಣಾ ಸ್ಥಳಕ್ಕೆ ಭೇಟಿ ನೀಡಿ ಪದೇ ಪದೇ ನೀರಿನ ಸಮಸ್ಯೆ ಆಗಲು ಕಾರಣ ಏನು ಎಂಬುದನ್ನು ಪರಿಶೀಲಿಸಿದರು.
ಆಗ ಪುರಸಭೆ ಕಾರ್ಮಿಕರು, ‘ನೀರೆತ್ತುವ ಪಂಪ್ಸೆಟ್ಗಳು ಕೆಟ್ಟಿರುವ ಕಾರಣ ನೀರು ಪೂರೈಕೆಯಲ್ಲಿ ತೊಂದರೆ ಆಗುತ್ತಿದೆ. ಕೆಸರು ಮಿಶ್ರಿತ ನೀರನ್ನು ಪಂಪ್ ಮಾಡಿದರೆ ಇರುವ ಒಂದು ಪಂಪ್ ಸಹ ಕೆಡುವ ಸಾಧ್ಯತೆ ಇದೆ. ಇದಲ್ಲದೇ, ವಿದ್ಯುತ್ ಕಡಿತ ಸಮಸ್ಯೆಯಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.