ADVERTISEMENT

ಖೋಟ್ಟಿ ಚಿನ್ನ ಅಡವಿಟ್ಟು 62.47 ಲಕ್ಷ ರೂ ವಂಚನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2017, 10:20 IST
Last Updated 31 ಡಿಸೆಂಬರ್ 2017, 10:20 IST

ಮುಳಗುಂದ: ಪಟ್ಟಣದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಚಿನ್ನಾಭರಣ ಪರಿಶುದ್ಧತೆ ಪರಿವೀಕ್ಷಕ ಮಂಜುನಾಥ ವಿ. ರಾಯ್ಕರ ಗ್ರಾಹಕರ ನಕಲಿ ಚಿನ್ನಾಭರಣವನ್ನು ಅಸಲಿ ಎಂದು ನೀಡಿ, ಬ್ಯಾಂಕ್‌ಗೆ ಲಕ್ಷಾಂತರ ರೂಪಾಯಿ ವಂಚಿಸಿ ನಾಪತ್ತೆಯಾಗಿದ್ದಾನೆ.

ಘಟನೆ ಸಂಬಂಧ ರಾಯ್ಕರ ಸೇರಿದಂತೆ 22 ಮಂದಿ ವಿರುದ್ಧ ಗದಗ ಪ್ರಾದೇಶಿಕ ಪ್ರಬಂಧಕ ಶೇಖರಶೆಟ್ಟಿ ಅವರು, ಮುಳಗುಂದ ಠಾಣೆಗೆ ದೂರು ಕೊಟ್ಟಿದ್ದಾರೆ.

ಮುಳಗುಂದ ವಾಸಿಯಾಗಿರುವ ರಾಯ್ಕರ ಹತ್ತು ವರ್ಷದಿಂದ ಬ್ಯಾಂಕ್‌ನಲ್ಲಿ ಚಿನ್ನಾಭರಣ ಪರಿಶುದ್ಧತೆ ಪರಿವೀಕ್ಷಕನಾಗಿ ಕೆಲಸ ಮಾಡುತ್ತಿದ್ದ. ಡಿ.16ರಂದು 9 ಗ್ರಾಹಕರ ನಕಲಿ ಚಿನ್ನಕ್ಕೆ ಅಸಲಿ ಚಿನ್ನವೆಂದು ದಾಖಲೆ ಕೊಟ್ಟಿರುವುದಾಗಿ ಆರೋಪಿ ತಪ್ಪು ಒಪ್ಪಿಕೊಂಡಿದ್ದ. ಅಲ್ಲದೆ, ಸಾಲದ ಮೊತ್ತ ಮರಳಿ ತುಂಬುವುದಾಗಿ ತಿಳಿಸಿದ್ದ. ಇದರಿಂದ ಅನುಮಾನಗೊಂಡ ಬ್ಯಾಂಕ್ ಅಧಿಕಾರಿಗಳು, ಶಾಖೆಯಲ್ಲಿರುವ 400ಕ್ಕೂ ಹೆಚ್ಚಿನ ಖಾತೆಗಳಲ್ಲಿ ಗ್ರಾಹಕರು ಅಡವಿಟ್ಟ ಚಿನ್ನಾಭರಣಗಳನ್ನು ಪರಿಸೀಲಿಸಿದ್ದಾರೆ. ಆಗ ಒಟ್ಟು 21 ಗ್ರಾಹಕರು ಖೊಟ್ಟಿ ಚಿನ್ನಾಭರಣ ಅಡವಿಟ್ಟು ₹62.47 ಲಕ್ಷ ಸಾಲ ಪಡೆದಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.