
ಗಜೇಂದ್ರಗಡ: ಜಾನುವಾರುಗಳಿಗೆ ಬೇಸಿಗೆ ಬೇಗೆಯಲ್ಲಿ ನೀರು ಸಿಗುತ್ತಿಲ್ಲ. ಕಷ್ಟ ಕಾಲಕ್ಕೆ ಸಂಗ್ರಹ ಮಾಡಿ ಇಟ್ಟುಕೊಂಡಿರುವ ಮೇವನ್ನು ಸಂರಕ್ಷಿಸಿಕೊಳ್ಳುವುದು ರೈತರಿಗೆ ದುಸ್ತರವಾಗಿದೆ.
ಬೆಂಕಿ ಅನಾಹುತ ಒಂದೆಡೆಯಾದರೆ, ಕಳ್ಳಕಾಕರ ಕಾಟ ಮತ್ತೊಂದೆಡೆ. ಬೇರೆಯವರ ಜಾನುವಾರುಗಳು ತಿಂದು ಹಾಕುತ್ತವೆ ಎಂಬ ಭಯ ಇನ್ನೊಂದೆಡೆ. ಹೀಗಾಗಿ ಇರುವ ಮೇವನ್ನು ರಕ್ಷಿಸಿಕೊಳ್ಳುವುದು ರೈತರಿಗೆ ಸವಾಲಾಗಿದೆ. ಆದರೆ ಇಲ್ಲೊಬ್ಬ ರೈತ ಕಲ್ಲಿನ ತುದಿಯಲ್ಲಿ ಹುಲ್ಲು ಮತ್ತು ಮೇವನ್ನು ಒಟ್ಟಿದ್ದು ಯಾರ ಗಮನಕ್ಕೂ ಬಂದಂತಿಲ್ಲ. ಜೊತೆಗೆ ಬೆಂಕಿ ಅನಾಹುತದಿಂದಲೂ ಸಿಲುಕುವ ಯಾವುದೇ ಅಪಾಯ ಇಲ್ಲ.
ಪಟ್ಟಣದ ಕಾಲಕಾಲೇಶ್ವರ ದೇವಸ್ಥಾನದ ಬೆಟ್ಟದ ನೆತ್ತಿಯ ಮೇಲಿರುವ ಭೈರಾಪುರ ಗ್ರಾಮ ಕೆಲವು ವರ್ಷಗಳಿಂದ ನಾಗರೀಕ ಜಗತ್ತಿನಿಂದ ದೂರವಿದ್ದು ಈಗೀಗ ಸಂಪರ್ಕ ಪಡೆದುಕೊಳ್ಳುತ್ತಿದೆ. ಲಂಬಾಣಿಗರೇ ವಾಸಿಸುವ ಬೈರಾಪುರ ತಾಂಡಾ ನಿಸರ್ಗ ರಮಣೀಯವಾದ ಸ್ಥಳ.
ಈ ತಾಂಡಾ ಸನಿಹದಲ್ಲೇ ಟಾಕರೆಪ್ಪ ಸೋಮಲೆಪ್ಪ ರಾಠೋಡ ಎಂಬುವವರು ಎತ್ತರದ ಗೋಟು ಕಲ್ಲಿನಲ್ಲಿ ಸುಮಾರು 2 ಚಕ್ಕಡಿ ಮೇವು ಮತ್ತು ಭತ್ತದ ಹುಲ್ಲು ಸೇರಿಸಿ ಬಣವೆ ಒಟ್ಟಿದ್ದಾರೆ. ಹೀಗಾಗಿ ಇಲ್ಲಿ ಜಾನುವಾರುಗಳಲ್ಲ, ಮನುಷ್ಯರೇ ಇದನ್ನು ಏರಲು ಹರಸಾಹಸ ಪಡಬೇಕಾಗುತ್ತದೆ.
‘ಇಲ್ಲಿ ನೀರು ಅರಸಿ ಬರುವ ದನಗಳ ಕಾಟದಿಂದ ಸಾಕಾಗಿ ಈ ಎತ್ತರದ ಕಲ್ಲಿನ ಮೇಲೆ ಬಣವೆ ಒಟ್ಟುತ್ತಾ ಬಂದಿದ್ದೇನೆ. ನಾನು ಮೇವನ್ನು ತೆಗೆದುಕೊಳ್ಳಲು ಕಲ್ಲನ್ನು ಹಿಡಿದು ಮೇಲೇರಿ ಮೇವು ತೆಗೆದು ಕೆಳಗೆ ಹಾಕುತ್ತೇನೆ. ಕಲ್ಲಿನ ಮೇಲೆ ಬಣವೆ ಒಟ್ಟಿದ ಪರಿಣಾಮ ನನಗೆ ದನಗಳ ಕಾಟವಿಲ್ಲ, ಕಳ್ಳಕಾಕರ ಭಯವೂ ಇಲ್ಲ’ಎನ್ನುತ್ತಾರೆ ಟಾಕರೆಪ್ಪ ರಾಠೋಡ.
ಬಣವೆಗೆ ನೀರು ಇಳಿಯದಂತೆ ಪ್ಲಾಸ್ಟಿಕ್ ಬ್ಯಾನರ್ ಹೊದಿಸಿ, ಅದು ಗಾಳಿಗೆ ಹಾರದಂತೆ ಸುತ್ತಲು ಸಣ್ಣ ಕಲ್ಲುಗಳನ್ನು ಇಟ್ಟು ಸಾಕಷ್ಟು ಜಾಗೃತಿ ವಹಿಸಿದ್ದಾರೆ. ಮಳೆಗಾಲದಲ್ಲಿ ಈ ಗೋಟುಗಲ್ಲಿನ ಸುತ್ತಲು ನೀರು ನಿಲ್ಲುತ್ತದೆ, ಆದರೆ ಮೇವು ಮಾತ್ರ ಹಾನಿಯಾಗುವುದಿಲ್ಲ. ಇದು ಟಾಕರೆಪ್ಪ ಅವರ ದೂರದೃಷ್ಟಿ ಎನ್ನಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.