ADVERTISEMENT

ಚುನಾವಣೆ ಭರಾಟೆ: ಕೃಷಿ ಚಟುವಟಿಕೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 6:55 IST
Last Updated 24 ಏಪ್ರಿಲ್ 2013, 6:55 IST
ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದಲ್ಲಿ ಶೇಂಗಾ ಒಡೆಯುವುದರಲ್ಲಿ ನಿರತರಾಗಿರುವ ರೈತ ಕುಟುಂಬ.
ಮುಂಡರಗಿ ತಾಲ್ಲೂಕಿನ ಹಾರೋಗೇರಿ ಗ್ರಾಮದಲ್ಲಿ ಶೇಂಗಾ ಒಡೆಯುವುದರಲ್ಲಿ ನಿರತರಾಗಿರುವ ರೈತ ಕುಟುಂಬ.   

ಮುಂಡರಗಿ: ಯುಗಾದಿ ಮುಗಿದ ತಕ್ಷಣ ಭರದಿಂದ ಬಿತ್ತನೆ ಪೂರ್ವ ಕೃಷಿ ಚಟುವಟಿಕೆ ಗಳಲ್ಲಿ ತೊಡಗಿಕೊಳ್ಳುತ್ತಿದ್ದ ತಾಲ್ಲೂಕಿನ ರೈತರು ವಿಧಾನಸಭಾ ಚುನಾವಣೆಯ ಭರಾಟೆಯಲ್ಲಿ ಬಿತ್ತನೆ ಪೂರ್ವ ಕೃಷಿ ಚಟುವಟಿಕೆಗಳನ್ನೆಲ್ಲ ಬದಿಗೊತ್ತಿ ಎಲ್ಲರೂ ಚುನಾವಣೆ ಲೆಕ್ಕಾ ಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ. 

ಚಂದ್ರಮಾನ ಯುಗಾದಿ ಮುಗಿಯುತ್ತಿ ದ್ದಂತೆಯೇ ಸಾಮಾನ್ಯವಾಗಿ ತಾಲ್ಲೂಕಿನ ಬಹುತೇಕ ರೈತರು ಕಬ್ಬಿಣ ನೇಗಿಲು (ರಂಟೆ), ಕುಂಟಿಯಂತಹ ಕೃಷಿ ಪೂರ್ವ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುತ್ತಿದ್ದರು.

ಆದರೆ ರಾಜ್ಯಾದ್ಯಂತ ಮೇ.5ರಂದು ಜರುಗಲಿರುವ ವಿಧಾನಸಭಾ ಚುನಾ ವಣೆಯ ಕಾವು ಎಲ್ಲ ರೈತರನ್ನು ಆವರಿಸಿ ್ದದು, ಚುನಾವಣೆ ಮುಗಿದು ಫಲಿತಾಂಶ ಹೊರ ಬೀಳುವವರೆಗೆ ಬಹುತೇಕ ರೈತರು ಸ್ವಯಂ ಪ್ರೇರಿತರಾಗಿ ತಾತ್ಕಾಲಿಕ ವಾಗಿ ಬಿತ್ತನೆ ಪೂರ್ವ ಕೃಷಿ ಚಟುವಟಿ ಕೆಗಳನ್ನು ಸ್ಥಗಿತಗೊಳಿಸಿದಂತೆ ತೋರು ತ್ತದೆ. ಇಡೀ ದಿನ ಸುರಿಯುವ ಬೆಂಕಿಯಂಥ ಬಿಸಿಲನ್ನು ಲೆಕ್ಕಿಸದೆ ರೈತರು ಮತ್ತು ಕೂಲಿ ಕಾರ್ಮಿಕರು ಮುಂಗಾರು ಮಳೆಯನ್ನು ಮರೆತು ಚುನಾವಣೆ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ರೈತರೆಲ್ಲ ಕೃಷಿ ಚಟುವಟಿಕೆಗಳಿಗೆ ತಾತ್ಕಾಲಿಕವಾಗಿ ತೆರೆ ಎಳೆದಿರು ವುದರಿಂದ ಕೃಷಿ ಸಲಕರಣೆಗಳು ದೂಳು ತಿನ್ನುತ್ತಿವೆ. 

ಸಾಮಾನ್ಯವಾಗಿ ಮುಂಗಾರು ಮಳೆ ಬೀಳುವು ದರೊಳಗಾಗಿ ಮಳೆಯಾಧಾರಿತ ಜಮೀನುಳ್ಳ ಎಲ್ಲ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ರಂಟೆ, ಕುಂಟೆ ಹೊಡೆದು ಬಿತ್ತನೆಗಾಗಿ ಹೊಲವನ್ನು ಹದಮಾಡಿಟ್ಟುಕೊಳ್ಳುತ್ತಾರೆ. ಸಾಂಪ್ರದಾಯಿಕ ಬಿತ್ತನೆಯನ್ನು ಅನುಸರಿಸುವ ಕೃಷಿ ಮಹಿಳೆಯರು ದೇಸಿ ಹಾಗೂ ಜವಾರಿ ಬೀಜಗಳ ಸಂಗ್ರಹ ಸೇರಿದಂತೆ, ಮನೆಯಲ್ಲಿ ಕುಳಿತು ಶೇಂಗಾ ಬೀಜ ಒಡೆಯುವುದು, ಕೃಷಿಗೆ ಅನುಕೂಲವಾಗುವ ಸಣ್ಣಪುಟ್ಟ ಕಾರ್ಯಗಳನ್ನು ಮಾಡುತ್ತಿರುತ್ತಾರೆ.

ನೂತನವಾಗಿ ರಂಟೆ ಕುಂಟಿಗಳ ಹಾಗೂ ಕೃಷಿ ಸಲಕರಣೆಗಳ ನಿರ್ಮಾಣಕ್ಕೆ ಮತ್ತು ದುರಸ್ತಿಗೆ ರೈತರಿಗೆ ಇದು ಸಕಾಲವಾಗಿದ್ದು, ಎಲ್ಲರೂ ಬಿಡುವಿಲ್ಲದ ಬಿತ್ತನೆ ಪೂರ್ವ ಕೃಷಿ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಬೇಕಾಗಿತ್ತು. ಆದರೆ ಎದೆಯ ಮೇಲೆ ನರ್ತನ ಮಾಡುತ್ತಿ ರುವಂತೆ ವಿಧಾನಸಭಾ ಚುನಾಚವಣೆ ಆಗಮಿಸಿದ್ದು, ರೈತ ಕುಟುಂಬಗಳಲ್ಲಿರುವ ಹಿರಿಯ ರೈತ ಜೀವಿಗಳು ಕಿರಿಯರ ನಿರ್ಲಕ್ಷ್ಯ ಕಂಡು ತಮ್ಮಳಗೆ ಗೊಣ ಗುತ್ತಿದ್ದಾರೆ.

ಬಿತ್ತನೆ ಪೂರ್ವ ಕೃಷಿ ಚಟುವಟಿಕೆಗಳಲ್ಲಿ ತೊಡಗಬೇಕೆನ್ನುವ ಕೆಲವು ರೈತರಿಗೆ ಸಹಾಯಕ ರಾಗಿ ಕಾರ್ಯ ನಿರ್ವಹಿಸಲು ಕೂಲಿ ಕಾರ್ಮಿಕರು ದೊರೆಯದಂತಾಗಿದ್ದು, ಕೂಲಿಕಾರ್ಮಿಕರ ಕೊರತೆಯಿಂದ ರೈತರೆಲ್ಲ ತತ್ತರಿಸುವಂತಾಗಿದೆ. ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿರುವ ಬಹುತೇಕ ಕೂಲಿ ಕಾರ್ಮಿಕರನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಅಭ್ಯರ್ಥಿಗಳು ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದು, ಅವರಿಗೆ ಪ್ರತಿದಿನ 150-200ರೂಪಾಯಿ ಹಣ ಮತ್ತು ಊಟ ಉಪಹಾರ ನೀಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕೃಷಿ ಹಾಗೂ ಮತ್ತಿತರ ಕೆಲಸಗಳಿಗೆ ಕೂಲಿ ಕಾರ್ಮಿಕರು ದೊರೆಯದಂತಾಗಿದ್ದು, ಚುನಾವಣೆ ಮುಗಿಯುವವರೆಗೂ ರೈತರಿಗೆ ಅನ್ಯದಾರಿ ಇಲ್ಲದಂತಾಗಿದೆ.

ಈ ಕುರಿತು `ಪ್ರಜಾವಾಣಿ'ಯೊಂದಿಗೆ ಮಾತ ನಾಡಿದ ರೈತ ಮಹಿಳೆಯೊಬ್ಬರು `ಇಲೆಕ್ಷನ್ನು ಬಂದಾಗಿಂದ ಹಳ್ಳ್ಯಾಗ, ಪ್ಯಾಟ್ಯಾಗ ಒಬ್ಬ ಕೂಲಿಯವ್ರ ಸಿಗುವಲ್ರು, ಎಲ್ಲರೂ ಇಲೆಕ್ಷನ್ನ ಮಾಡ್ತಾರಂತ. ಇಲೆಕ್ಷನ್ನು ಇವತ್ತು ಬರ್ತೈತಿ ನಾಳೆ ಹೊಕ್ಕೈತಿ, ಹಂಗಂತ ಹೇಳಿ ಹೊಟ್ಟಿ ತಿಂಬುಸೊ ಭೂಮಿತಾಯಿನ ಮರಿಯಾಕ ಆಕೈತೇನು. ಸುಡಾ ಬಿಸಲಾಗ ಎಲ್ರೂ ಹೊಲ ಮನಿ ಬಿಟ್ಟು ತಿರಗತಾ ರಲ್ಲ ಇಲೆಕ್ಷನ್ನು ಯಾರಿಗೆರ ಅನ್ನಹಾಕತೈತೇನು?' ಎಂದು ಖಾರವಾಗಿ ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.