ADVERTISEMENT

ಜಿಲ್ಲೆಯಲ್ಲಿ ಜೆಡಿಎಸ್ ಸಂಘಟನೆಗೆ ಒತ್ತು

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 9:10 IST
Last Updated 19 ಜೂನ್ 2011, 9:10 IST

ಗದಗ: ಜಿಲ್ಲೆಯಲ್ಲಿ ಗ್ರಾಮ ಮಟ್ಟದಿಂದ ಪಕ್ಷ ಸಂಘಟನೆ ಮೂಲಕ ಜಾತ್ಯತೀತ ಜನತಾ ದಳವನ್ನು ಬಲಪಡಿಸಲು ಯೋಜಿಸಲಾಗಿದೆ ಎಂದು ಮಾಜಿ ಸಚಿವ ಪಿ.ಸಿ. ಸಿದ್ಧನಗೌಡ್ರ ಹೇಳಿದರು.

ನಗರದ ಅಕ್ಕನಬಳಗದಲ್ಲಿ ಶನಿವಾರ ನಡೆದ ಗದಗ ಜಿಲ್ಲಾ ಜಾತ್ಯತೀತ ಜನತಾದಳದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.  ಇವತ್ತು ರಾಜಕಾರಣ ಎನ್ನುವುದು ಆದಾಯದ ಮೂಲ ಎಂಬಂತಾಗಿದೆ. ಸ್ವಾರ್ಥ ರಾಜಕಾರಣದಿಂದ ಆಪರೇಷನ್ ಕಮಲ ನಡೆಸಿರುವ ಬಿಜೆಪಿ ಸರ್ಕಾರ ಹೆಚ್ಚು ಕಾಲ ಉಳಿಯದು ಎಂದು ಅಭಿಪ್ರಾಯಪಟ್ಟ ಅವರು ಈ ಕುರಿತು ಜನ ಎಚ್ಚೆತ್ತುಕೊಳ್ಳಬೇಕು. ಭ್ರಷ್ಟರ ವಿರುದ್ಧ ಲೋಕಾಯುಕ್ತರಿಗೆ ದೂರು ನೀಡಬೇಕು ಎಂದರು.

ಮಾಜಿ ಸಚಿವ ಎಂ.ಸಿ. ಮನಗೂಳಿ ಮಾತನಾಡಿ, ಪ್ರತಿ ಮತಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ಕಾರ್ಯಕರ್ತರನ್ನು ಸಂಘಟಿಸಬೇಕು. ಹಾಗಾದಲ್ಲಿ ಮಾತ್ರ ಪಕ್ಷ ಬಲಪಡಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಸಭೆಯಲ್ಲಿ ಪಕ್ಷದ ಮುಖಂಡರಾದ ಬಿ.ಎಫ್. ದಂಡಿನ, ತಾಲ್ಲೂಕು ಘಟಕದ ಅಧ್ಯಕ್ಷರಾದ ತಿಪ್ಪಣ್ಣ ಕೊಂಚಿಗೇರಿ, ಎಂ.ಸಿ. ವಡ್ಡಟ್ಟಿ, ಎಂ.ಎಸ್. ಪರ್ವತ ಗೌಡ್ರ, ರಾಮಣ್ಣ ಸಕ್ರೋಜಿ, ಬಸವರಾಜ ಸಾಬಳೆ, ಜಿಲ್ಲಾ ಯುವ ಅಧ್ಯಕ್ಷ ರಮೇಶ ಕಲಬುರ್ಗಿ ಹಾಗೂ ಇತರರು ಮಾತನಾಡಿದರು.

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀನಿವಾಸ ಶೇಠ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಅಧ್ಯಕ್ಷ ರವಿ ದಂಡಿನ, ಮಾರುತಿ ಗಡಾದ, ಶಿವನಗೌಡ ಗೌಡ್ರ, ಬಿ.ಎಸ್. ಹಿರೇಗೌ ಡ, ಶರಣಪ್ಪ ರೇವಡಿ, ದಾವಲ್ ಎಂ. ಮುಳಗುಂದ  ಪಾಲ್ಗೊಂಡಿದ್ದರು.

ಗದ್ದಲ-ಐವರ ಉಚ್ಛಾಟನೆ: ಈ ಸಂದರ್ಭ ಸಂಘಟನೆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರು ಪಕ್ಷದ ಮುಖಂಡರ ವಿರುದ್ಧ ಗದ್ದಲ ಆರಂಭಿಸಿದರು. ಒಂದಿಷ್ಟು ಹೊತ್ತು ಮಾತಿನ ಚಕಮುಕಿ ನಡೆಯಿತು. ನಂತರ ಪಿ.ಸಿ. ಸಿದ್ಧನಗೌಡ್ರ ಹಾಗೂ ಇತರರು ಕಾರ್ಯಕರ್ತರನ್ನು ಸಮಾಧಾನ ಪಡಿಸಿದರು.

ಈ ಗದ್ದಲವನ್ನು ಪಕ್ಷ ಅನುಚಿತ ವರ್ತನೆ ಎಂದು ಪರಿಗಣಿಸಿದ್ದು, ಕಾರ್ಯಕರ್ತರಾದ ಅಮರೇಶ ಬೂದಿಹಾಳ, ದೊಡ್ಡಬಸಪ್ಪ ನವಲಗುಂದ, ಮೈಲಾರಪ್ಪ ದೇಶಣ್ಣವರ, ವೀರಯ್ಯ ಗಂಟಿಮಠ, ಅಂದಪ್ಪ ಅಕ್ಕಿ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಅಧ್ಯಕ್ಷ ಶ್ರೀನಿವಾಸ ಶೇಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.