ADVERTISEMENT

ಜ್ಞಾನಾರ್ಜನೆ ಪೂಜೆಯಂತೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 8:40 IST
Last Updated 2 ಫೆಬ್ರುವರಿ 2011, 8:40 IST

ಗದಗ: ಜ್ಞಾನಕ್ಕೆ ಸಮಾನವಾದುದು ಯಾವುದೂ ಇಲ್ಲ. ಜ್ಞಾನಾರ್ಜನೆ ಎಂಬುದು ದೇವರ ಪೂಜೆಗೆ ಸಮ ಎಂದು ತೋಂಟದ ಡಾ.ಸಿದ್ಧಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘ, ಕಲಾಚೇತನ ಸಂಘದ ಆಶ್ರಯದಲ್ಲಿ ಸೋಮವಾರ ಸಂಜೆ ನಡೆದ 2000 ನೇ ಶಿವಾನುಭವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಪುಸ್ತಕಗಳು, ಪತ್ರಿಕೆ, ನಿಯತಕಾಲಿಕೆಗಳನ್ನು ಪ್ರತಿನಿತ್ಯ ಓದುವ ಹವ್ಯಾಸ ಬೆಳೆಸಿಕೊಂಡರೆ ಜಾನಾರ್ಜನೆ, ಲೋಕದ ಸ್ಥಿತಿ-ಗತಿಗಳ ಅರಿವಿಗೆ ಸಹಕಾರಿ ಎಂದರು.ಓದುವ ಹವ್ಯಾಸದೊಂದಿಗೆ ಓದುವ ಕನ್ನಡಿಗರ ಸಂಖ್ಯೆ ಬೆಳೆಯಬೇಕು. ಇದರೊಂದಿಗೆ ವೈಚಾರಿಕ ಚಿಂತನೆಯ ವ್ಯಕ್ತಿತ್ವ ನಮ್ಮದಾಗಬೇಕು ಎಂದರು.ಲಿಂಗಾಯತ ಪ್ರಗತಿಶೀಲ ಸಂಘ ಶ್ರೀ ಮಠದ ಮುಖವಾಣಿಯಾದ ಶರಣರ ಸಂಘಟನೆ ಎಂದು ಬಣ್ಣಿಸಿದ ಶ್ರೀಗಳು, ಜನರ ಜ್ಞಾನ ದಿಗಂತ ಹೆಚ್ಚಿಸುವ ಜತೆಗೆ ಸಾಮಾಜಿಕ, ಧಾರ್ಮಿಕ ವೈಚಾರಿಕತೆ ಬಿಂಬಿಸಿ ಜಗದ ನೋವು ನಲಿವಿಗೆ ಸ್ಪಂದಿಸಿದ ಹೆಗ್ಗಳಿಕೆ ಶಿವಾನುಭವಕ್ಕಿದೆ ಎಂದರು.

ಭಾರತದಂತಹ ನೂರಾರು ಜಾತಿ ಸಮಾಜಗಳ ಸಂಕೀರ್ಣ ವ್ಯವಸ್ಥೆಯ ದೇಶದಲ್ಲಿ ್ಲಕೋಮು ಸೌಹಾರ್ದತೆ, ಭಾವೈಕ್ಯತೆ ಎಂಬುವುದು ಎಲ್ಲ ಜಾತಿ ಧರ್ಮಗಳ ಮೂಲಾಧಾರವಾದ ಮಾನವೀಯತೆ ಉಳಿದು ಬೆಳೆದುಬರಲು ಸಹಕಾರಿ ಎಂದರು.ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಡಾ.ಸತ್ಯಾನಂದ ಪಾತ್ರೋಟ ಕೋಮುವಾದಕ್ಕಿಂತ ಜಾತಿವಾದ ತುಂಬಾ ಅಪಾಯಕಾರಿಯಾಗಿ ಬೆಳೆಯುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಲಾಚೇತನ ಸಾಂಸ್ಕೃತಿಕ ಅಕಾಡೆಮಿಯಿಂದ  ಕೊಡಮಾಡುವ ಮಾಧ್ಯಮ ಮಂದಾರ ಪ್ರಶಸ್ತಿಯನ್ನು ಪತ್ರಕರ್ತ ಬಿ.ಎಂ.ಹನೀಫ್ ಅವರಿಗೆ ಪ್ರದಾನ ಮಾಡಲಾಯಿತು.ಯುವ ಸಾಮಾಜಿಕ ಕಾರ್ಯಕರ್ತ ಶರಣಪ್ಪ ಮತ್ತಿಕಟ್ಟಿ, ಚಲನಚಿತ್ರ ನಟ ನವೀನಕೃಷ್ಣ, ಚಲನಚಿತ್ರ ನಿರ್ಮಾಪಕ ಉಮೇಶ ಬಣಕಾರ, ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ ಕಾ.ವೆಂ. ಶ್ರಿನಿವಾಸ, ಅನಿಲ ಮೆಣಸಿನಕಾಯಿ ಮತ್ತಿತರರು ಹಾಜರಿದ್ದರು.

ಹೇಮಾ ವಾಗ್ಮೋಡೆ ತಂಡದಿಂದ ನೃತ್ಯ ಕಾರ್ಯಕ್ರಮ ನಡೆಯಿತು. ಸದಾಶಿವ ಹೊರಟ್ಟಿ ಅವರಿಂದ ಧರ್ಮಗ್ರಂಥ ಪಠಣ, ಮಂಜುಳಾ ವಿ.ಅಕ್ಕಿ ಅವರಿಂದ ಚಿಂತನೆ ನಡೆಯಿತು.ಲಿಂಗಾಯತ  ಪ್ರಗತಿಶೀಲ ಸಂಘದ ಅಧ್ಯಕ್ಷ ಈಶಣ್ಣ ಮುನವಳ್ಳಿ ಸ್ವಾಗತಿಸಿದರು. ಡಿ.ಎಲ್. ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.